ಬೆಳಗಾವಿ
ನಮ್ಮ ಹೋರಾಟ ವಕ್ಫ್ ಬೋರ್ಡ್ ಭೂಕಬಳಿಕೆಯ ನೀತಿ ವಿರುದ್ಧ. ವಿಜಯೇಂದ್ರ ನಮ್ಮ ರಾಜ್ಯಾಧ್ಯಕ್ಷರು ನವೆಂಬರ್ 21ಕ್ಕೆ ಸುದ್ದಿಗೋಷ್ಠಿ ಕರೆ ಕೊಟ್ಟಿದ್ರು. ನವೆಂಬರ್ 22ಕ್ಕೆ ಜಿಲ್ಲಾ ಕೇಂದ್ರಗಳಲ್ಲಿ ಹೋರಾಟಕ್ಕೆ ಕರೆ ಕೊಟ್ಟಿದ್ರು. ನಾನೂ ಕೂಡ ವಿಜಯೇಂದ್ರ ನೀಡಿದ ಕರೆಗೆ ಸುದ್ದಿಗೋಷ್ಠಿ, ಪ್ರತಿಭಟನೆಯಲ್ಲಿ ಭಾಗಿಯಾಗಿದ್ದೆ. ಎಲ್ಲ ಕಡೆಯೂ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಹೇಳಿದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ ಟೀಂ ವಿರುದ್ಧ ವಿಜಯೇಂದ್ರ ಬಣದ ದೂರು ವಿಚಾರವಾಗಿ, ಬೆಳಗಾವಿಯಲ್ಲಿ ಮಾಜಿ ಸಂಸದ, ಬಿಜೆಪಿ ರೆಬೆಲ್ ನಾಯಕ ಪ್ರತಾಪ ಸಿಂಹ ಹೇಳಿಕೆ ನೀಡಿದರು.
ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಅಹೋರಾತ್ರಿ ಧರಣಿ ನಡೆಸಿದ್ರು, ಜೆಪಿಸಿ ಚೇರ್ಮನ್ರು ಭೇಟಿ ನೀಡಿದ್ರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೂಡ ಸ್ಥಳಕ್ಕೆ ಭೇಟಿ ನೀಡಿ ಹೋರಾಟದಲ್ಲಿ ಭಾಗಿಯಾಗಿದ್ರು ಎಂದರು.
ನಮ್ಮ ಹೋರಾಟ ಬಿಜೆಪಿಯ ಯಾವುದೇ ವ್ಯಕ್ತಿ ವಿರುದ್ಧದ ಹೋರಾಟ ಅಲ್ಲ. ವಿಜಯೇಂದ್ರ, ಯತ್ನಾಳ, ರಮೇಶ ಜಾರಕಿಹೊಳಿ, ನಮ್ಮ ಕಾರ್ಯಕರ್ತರ ಗುರಿ ಒಂದೇ. ಅದು ವಕ್ಫ್ ಭೂಕಬಳಿಕೆಗೆ ತಡೆ ಹಾಕಿ, ನಮ್ಮ ರೈತರ ಭೂಮಿ ರಕ್ಷಿಸುವುದಾಗಿದೆ. ಇಲ್ಲಿ ಅಪಸ್ವರ, ಭಿನ್ನ ಅಭಿಪ್ರಾಯಕ್ಕೆ ಅವಕಾಶ ಇಲ್ಲ ಎಂದು ಪ್ರತಾಪ ಸಮರ್ಥನೆ ಮಾಡಿದರು.
ಯತ್ನಾಳರನ್ನು ಉಚ್ಛಾಟನೆ ಮಾಡಿ ಎಂಬ ರೇಣುಕಾಚಾರ್ಯ ಹೇಳಿಕೆಗೆ ಪ್ರತಾಪ ಸಿಂಹ ತಿರುಗೇಟು ನೀಡಿದರು.
ಜನರಿಂದ ತಿರಸ್ಕಾರಗೊಂಡು ಮೂಲೆಗುಂಪಾಗಿರುವ ಅಪ್ರಸ್ತುತ, ವ್ಯಕ್ತಿಗಳ ಮಾತಿಗೆ ಉತ್ತರ ಕೊಡುವ ಅಗತ್ಯವಿಲ್ಲ. ನಮ್ಮ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ, ಜಿಲ್ಲಾ ನಾಯಕರ ಸಮ್ಮುಖದಲ್ಲಿ ಹೋರಾಟ ನಡೆಯುತ್ತಿದೆ.
ನಮ್ಮ ಒಟ್ಟಾರೆ ಹೋರಾಟ ವಕ್ಫ್ ಬೋರ್ಡ್ ವಿರುದ್ಧ, ಸಿದ್ದರಾಮಯ್ಯನವರ ಹಿಂದೂ ವಿರೋಧಿ ಧೋರಣೆ ವಿರುದ್ಧ. ವೈಯಕ್ತಿಕ ಮೇಲಾಟ, ಈ ರೀತಿಯ ಅಪಸ್ವರದ ಮಾತುಗಳಿಗೆ ಎಲ್ಲಿ ಜಾಗವಿದೆ. ಈ ರೀತಿ ಏಕೆ ಬರುತ್ತಿವೆ ನಂಗೆ ಅರ್ಥ ಆಗ್ತಿಲ್ಲ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಕ್ಫ್ ಕಾಯ್ದೆಗೆ ತಿದ್ದುಪಡಿ ತರುತ್ತಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
