ಹುಬ್ಬಳ್ಳಿ
ಹುಬ್ಬಳ್ಳಿಯ ಉಣಕಲ ಬಳಿಯ ಅಚ್ಚವ್ವನ ಕಾಲೋನಿಯಲ್ಲಿ ಕಳೆದ ವಾರ ಸಂಭವಿಸಿದ ಸಿಲಿಂಡರ್ ಸ್ಫೋಟ ದುರಂತದಲ್ಲಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾತಿಯಾಗದೇ ಅಸುನೀಗಿದ ಅಯ್ಯಪ್ಪ ಮಾಲಾಧಾರಿಗಳ ಕುಟುಂಬಗಳ ನೆರವಿಗೆ ಮಾನ್ಯ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಎಸ್ ಲಾಡ ಅವರು ನಿಂತಿದ್ದಾರೆ.
ಈ ಕುರಿತು ಮಾನ್ಯ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಸಚಿವ ಲಾಡ ಅವರು ಮೃತರ ಕುಟುಂಬಗಳ ಸಂಕಷ್ಟ ವಿವರಿಸಿ, ಸಾಧ್ಯವಾದಷ್ಟು ಹೆಚ್ಚಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ಕೊಡಿವಂತೆ ಮನವಿ ಮಾಡಿದ್ದಾರೆ.
ಸಚಿವ ಸಂತೋಷ ಲಾಡ ಅವರ ಕಳಕಳಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೃತಪಟ್ಟ ಎಲ್ಲ ಅಯ್ಯಪ್ಪ ಮಾಲಾಧಾರಿಗಳ ನೊಂದ ಕುಟುಂಬಗಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ ₹5 ಲಕ್ಷ ಪರಿಹಾರ ನೀಡಲಾಗುವುದೆಂದು ಆದೇಶಿಸಿದ್ದಾರೆ.
ನೊಂದ ಕುಟುಂಬಗಳ ಕಣ್ಣೀರು ಒರೆಸಲು ಸತತವಾಗಿ ಪ್ರಯತ್ನ ಪಡುತ್ತಿರುವ ಲಾಡ ಅವರು ಅಯ್ಯಪ್ಪ ಮಾಲಾಧಾರಿಗಳನ್ನು ಉಳಿಸಿಕೊಳ್ಳಲು ಸರ್ವ ಪ್ರಯತ್ನಗಳನ್ನು ಮಾಡಿದ್ದರು. ಬೆಂಗಳೂರಿನಿಂದ ತಜ್ಞ ವೈದ್ಯರನ್ನು ಸಹ ಲಾಡ ಅವರು ಕರೆಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗಾಯಗೊಂಡಿದ್ದ 9 ಜನರ ಪೈಕಿ 8 ಜನ ಅಸುನೀಗಿದ್ದರು. ಇನ್ನೊಬ್ಬ ಬಾಲಕ ಮಾಲಾಧಾರಿ ಸದ್ಯ ಅಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಮುಂದುವರೆದಿದೆ.
ಮೃತರ ಕುಟುಂಬಗಳ ಕಷ್ಟಕ್ಕೆ ಕರಗಿದ್ದ ಲಾಡ ಅವರು ಆರಂಭದಲ್ಲೇ ತಮ್ಮ ಸಂತೋಷ ಲಾಡ ಫೌಂಡೇಶನ್ ಮೂಲಕ ವೈಯುಕ್ತಿಕ ಧನ ಸಹಾಯ ಮಾಡಿದ್ದರು. ಈಗ ಸರ್ಕಾರದಿಂದ ಸಹ ಪರಿಹಾರ ಕೊಡಿಸಿದ್ದು, ನೊಂದ ಕುಟುಂಬಗಳ ಸಂಕಷ್ಟಕ್ಕೆ ಆಸರೆಯಾಗುತ್ತಿದ್ದಾರೆ.
