ಧಾರವಾಡ
ತಮಿಳುನಾಡಿನಲ್ಲಿ ನಡೆದ ದಕ್ಷಿಣ ಭಾರತ ಕುಸ್ತಿ ಚಾಂಪಿಯನ್ಷಿಪ್ನ ಹಿರಿಯರ (87ಕೆ.ಜಿ.) ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಧಾರವಾಡ ತಾಲೂಕಿನ ಯಾದವಾಡ ಗ್ರಾಮದ ಅಶೋಕ ಹನುಮಂತಪ್ಪ ಮಾಕಣ್ಣವರ ಅವರಿಗೆ ಅದ್ಧೂರಿ ಸ್ವಾಗತ ಕೋರುವ ಜತೆಗೆ ಗ್ರಾಮದ ವತಿಯಿಂದ ಪೌರಸನ್ಮಾನ ಮಾಡಲಾಯಿತು.
ಪದಕದೊಂದಿಗೆ ಗ್ರಾಮಕ್ಕೆ ಬಂದ ಕುಸ್ತಿಪಟು ಅಶೋಕನನ್ನು ವಾದ್ಯಮೇಳದೊಂದಿಗೆ ಸ್ವಾಗತಿಸಿದ ಗ್ರಾಮಸ್ಥರು, ಗ್ರಾಮದ ತುಂಬೆಲ್ಲ ಮೆರವಣಿಗೆ ಮಾಡುವ ಮೂಲಕ ಸಾಧನೆಗೆ ಪ್ರೋತ್ಸಾಹ ನೀಡಿದರು. ಪ್ರತಿ ಓಣಿ, ಬಡಾವಣೆಯಲ್ಲಿಯೂ ಸನ್ಮಾನಿಸಿ ಸತ್ಕರಿಸಿ ಸಿಹಿ ತಿನಿಸಿ ಸಂಭ್ರಮಿಸಿದರು. ಗ್ರಾಮ ಪಂಚಾಯ್ತಿ ವತಿಯಿಂದಲೂ ಅವರನ್ನು ಸನ್ಮಾನಿಸಲಾಯಿತು.
ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ವಿವಿಧ ಸಂಘಸಂಸ್ಥೆಗಳು, ಪಕ್ಕದೂರಿನ ಗ್ರಾಪಂ ಸದಸ್ಯರು ಕುಸ್ತಿಪಟು ಅಶೋಕನನ್ನು ಸನ್ಮಾನಿಸಿ ಗೌರವಿಸಿದರು. ಅಶೋಕ ಗ್ರೀಕೋ ರೋಮನ್ ಕುಸ್ತಿ ವಿಭಾಗದಲ್ಲಿ ಕೇರಳದ ಪಟು ಆನಂದ ಬಿ.ಎಸ್. ಅವರನ್ನು 10-00 ಪಾಯಿಂಟ್ಗಳಿಂದ ಸೋಲಿಸಿರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅಶೋಕ ಮಾಕಣ್ಣವರ, ನನ್ನ ತವರೂರು ಯಾದವಾಡ ಸೇರಿದಂತೆ ಸುತ್ತಲಿನ ಜನರು ತೋರಿದ ಪ್ರೀತಿ ನನಗೆ ಇನ್ನಷ್ಟು ಸಾಧಿಸುವ ಹುಮ್ಮಸ್ಸು ತಂದಿದೆ. ಈ ಸನ್ಮಾನವನ್ನು ನಾನು ಮರೆಯಲಾರೆ. ಒಲಂಪಿಕ್ನಂತ ಕ್ರೀಡಾಕೂಟದಲ್ಲಿ ಭಾಗವಹಿಸಲು ಬೇಕಾದ ಅಗತ್ಯ ತಯಾರಿ ಮಾಡಿಕೊಳ್ಳುವುದಾಗಿ ಸಂತಸ ಹಂಚಿಕೊಂಡರು.
ಗ್ರಾಮ ಪಂಚಾಯ್ತಿ ಪರವಾಗಿ ಮಾತನಾಡಿದ ಗ್ರಾಪಂ ಸದಸ್ಯ, ಮಾಜಿ ಅಧ್ಯಕ್ಷ ಮಡಿವಾಳಪ್ಪ ದಿಂಡಲಕೊಪ್ಪ, ಇದು ಉಳಿದವರಿಗೆ ಸ್ಫೂರ್ತಿ ಆಗಬೇಕು. ಅಶೋಕನ ಸಾಧನೆಯ ಹಿಂದೆ ಪರಿಶ್ರಮ ಇದೆ. ಅವರ ತಂದೆ- ತಾಯಿಯ ಪ್ರೋತ್ಸಾಹವಿದೆ. ಈ ರೀತಿಯ ಸಾಧನೆಯನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ. ಇವರು ನಮ್ಮೂರಿನ ಜತೆ ಕರ್ನಾಟಕದ ಕೀರ್ತಿ ತಂದಿದ್ದಾರೆ ಎಂದು ಬಣ್ಣಿಸಿದರು.
ಕೃಷಿ ಸಹಕಾರಿ ಪತ್ತಿನ ಅಧ್ಯಕ್ಷ ಪರಮೇಶ್ವರ ಕೋಯಪ್ಪನವರ ಮಾತನಾಡಿ, ಕುಸ್ತಿಯಲ್ಲಿ ಸಾಧನೆ ತೋರುವುದು ಸುಲಭದ ಕೆಲಸವಲ್ಲ. ಇವರು ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧಿಸುವಂತಾಗಲಿ ಎಂದು ಶುಭ ಹಾರೈಸಿದರು.
ಗ್ರಾಮದ ಮುಖಂಡ ಶಶಿಮೌಳಿ ಕುಲಕರ್ಣಿ ಮಾತನಾಡಿ, ದಕ್ಷಿಣ ಭಾರತ ಕುಸ್ತಿ ಚಾಂಪಿಯನ್ಷಿಪ್ ಗೆದ್ದ ಅಶೋಕನ ಸಾಧನೆ ಶ್ಲಾಘನೀಯ. ಅವರಿಗೆ ಎಲ್ಲ ರೀತಿಯ ಅಗತ್ಯ ಸಹಕಾರವನ್ನು ಗ್ರಾಮದ ಪರವಾಗಿ ನೀಡಲು ಬದ್ಧರಿರುವುದಾಗಿ ಹೇಳಿದರು.
ಗ್ರಾಪಂ ಅಧ್ಯಕ್ಷೆ ಲಕ್ಷ್ಮಿ ಗಳಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಗ್ರಾಪಂ ಉಪಾಧ್ಯಕ್ಷರಾದ ಭೀಮವ್ವ ತೋಟಣ್ಣವರ, ಪಾರವ್ವ ಗದಗಯ್ಯ ಹಿರೇಮಠ, ಶಿವಾನಂದ ಬೆಂಡಿಗೇರಿ, ಮಂಜುನಾಥ ಬಂಡೆಪ್ಪನವರ, ಲಕ್ಷ್ಮೀ ಹುಲಮನಿ, ವಿಜಯಾ ವಾಲೀಕಾರ, ಗಂಗಾಧರ ಮುಮ್ಮಿಗಟ್ಟಿ, ಶೇಖಣ್ಣ ಕುಂಬಾರ, ಶಿವಾನಂದ ನಾಗಣ್ಣವರ, ಶ್ರೀಶೈಲ ಗೆದ್ದಿಕೇರಿ, ಯಲ್ಲಪ್ಪ ಬಾರಕೇರ, ಆನಂದ ಕೇಶಗೊಂಡ, ಮಹಾಂತೇಶ ಗಳಗಿ, ಮೃತ್ಯುಂಜಯ ಹಿರೇಮಠ, ಜಗದೀಶ ಕೇಶಗೊಂಡ, ಉಮೇಶ ಕೋಯಪ್ಪನವರ, ನಾಗೇಶ ಯಲಿಗಾರ, ಹನುಮಂತಪ್ಪ ಮಾಕಣ್ಣವರ, ಸುರೇಶ ಬೆಂಡಿಗೇರಿ ಸೇರಿದಂತೆ ಮತ್ತಿತರರು ಇದ್ದರು. ಬಸವರಾಜ ಪಟ್ಟಣದವರ ನಿರೂಪಿಸಿದರು.

