ಇಸ್ಲಾಮಾಬಾದ್:
ಪಾಕಿಸ್ತಾನದ ಕರಾಚಿಯ ಮಾಲಿರ್ ಪ್ರದೇಶದ ಜೈಲಿನಲ್ಲಿ ಬುಧವಾರ ಭಾರತೀಯ ಮೀನುಗಾರನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ. ಮೃತನನ್ನು 52 ವರ್ಷದ ಗೌರವ್ ರಾಮ್ ಆನಂದ್ ಎಂದು ಗುರುತಿಸಲಾಗಿದೆ. ಜೈಲು ಬ್ಯಾರಕ್ನ ಸ್ನಾನಗೃಹದಲ್ಲಿ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಮೃತ ವ್ಯಕ್ತಿ 2022 ರಿಂದ ಕರಾಚಿ ಜೈಲಿನಲ್ಲಿದ್ದ ಎಂದು ತಿಳಿದು ಬಂದಿದೆ.
ಸಮುದ್ರದ ಗಡಿ ದಾಟಿ ಪಾಕಿಸ್ತಾನದ ಗಡಿಯೊಳಗೆ ತೆರಳಿದ್ದಾಗ ಈತನ ಬಂಧನವಾಗಿದೆ ಎಂದು ತಿಳಿದು ಬಂದಿದೆ. ಜೈಲು ಸೂಪರಿಂಟೆಂಡೆಂಟ್ ಅರ್ಷದ್ ಹುಸೇನ್ ಅವರು ಗೌರವ್ ರಾಮ್ ಆನಂದ್ ಮೃತಪಟ್ಟಿರುವ ವಿಷಯವನ್ನು ಖಚಿತಗೊಳಿಸಿದ್ದಾರೆ. ಬ್ಯಾರಕ್ಗಳಲ್ಲಿ, ಎಲ್ಲಾ ಭಾರತೀಯ ಕೈದಿಗಳನ್ನು ಬಂಧಿಸಲಾಗಿದೆ. ಅದರಲ್ಲಿದ್ದ ಆನಂದ್ ಮಂಗಳವಾರ ರಾತ್ರಿ ಶೌಚಾಲಯಕ್ಕೆ ಹೋಗಿ ಬರುತ್ತೇನೆ ಎಂದು ಸ್ನಾನಗೃಹದಲ್ಲಿ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಡ್ಯೂಟಿ ವೈದ್ಯರು ಕೈದಿಯನ್ನು ಪರೀಕ್ಷಿಸಿ ಬೆಳಗಿನ ಜಾವ 2:20 ಕ್ಕೆ ಆತ ಮೃತಪಟ್ಟಿದ್ದಾನೆಂದು ಘೋಷಿಸಿದರು ಎಂದು ಜೈಲರ್ ಹೇಳಿದರು. ನಂತರ ಮ್ಯಾಜಿಸ್ಟ್ರೇಟ್ ವಿಚಾರಣೆ ನಡೆಸಿ, ಕಾನೂನು ಪ್ರಕ್ರಿಯೆಗಳು ಮತ್ತು ಮುಂದಿನ ಆದೇಶಗಳು ಪೂರ್ಣಗೊಳ್ಳುವವರೆಗೆ ಶವವನ್ನು ಸೊಹ್ರಾಬ್ ಗೋತ್ನಲ್ಲಿರುವ ಈಧಿ ಫೌಂಡೇಶನ್ನ ಕೋಲ್ಡ್ ಸ್ಟೋರೇಜ್ ಸೌಲಭ್ಯದಲ್ಲಿ ಇಡಲು ಆದೇಶಿಸಿದರು ಎಂಬುದು ತಿಳಿದು ಬಂದಿದೆ. ಫೆಬ್ರವರಿ 2022 ರಲ್ಲಿ ಡಾಕ್ಸ್ ಪೊಲೀಸರಿಂದ ಬಂಧಿಸಲ್ಪಟ್ಟ ಮೃತನನ್ನು ಅದೇ ತಿಂಗಳ ಕೊನೆಯಲ್ಲಿ ಪಶ್ಚಿಮ ಕರಾಚಿ ಮ್ಯಾಜಿಸ್ಟ್ರೇಟ್ ಮಾಲಿರ್ನಲ್ಲಿ ಜೈಲಿಗೆ ಹಾಕಿದ್ದರು ಎಂದು ವರದಿ ತಿಳಿಸಿದೆ. 2 ವರ್ಷಗಳಲ್ಲಿ, ಪಾಕಿಸ್ತಾನದ ಜೈಲಿನಲ್ಲಿ ಮೃತ ಪಟ್ಟಿರುವ 9 ನೇ ಮೀನುಗಾರ ಈತನಾಗಿದ್ದಾನೆ.
ಫೆಬ್ರವರಿಯಲ್ಲಿ, ಫೆಬ್ರವರಿ 22 ರಂದು ಮಾಲಿರ್ ಜೈಲಿನಿಂದ ಬಿಡುಗಡೆಯಾದ 22 ಭಾರತೀಯ ಮೀನುಗಾರರನ್ನು ವಾಘಾ ಗಡಿಯಲ್ಲಿ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಪಾಕಿಸ್ತಾನದ ಪ್ರಾದೇಶಿಕ ಜಲ ಪ್ರದೇಶವನ್ನು ಆಕಸ್ಮಿಕವಾಗಿ ದಾಟಿದ್ದಕ್ಕಾಗಿ ಶಿಕ್ಷೆ ಅನುಭವಿಸಿದ ನಂತರ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಇನ್ನೂ 180 ಕ್ಕೂ ಅಧಿಕ ಮೀನುಗಾರರು ಬಂಧಿಯಾಗಿಯೇ ಇದ್ದು, ಬಿಡುಗಡೆಗಾಗಿ ಕಾಯುತ್ತಿದ್ದಾರೆ.