ಕಲಬುರಗಿ:
ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಎಲ್ಲ ಕ್ರಮ ಕೈಗೊಳ್ಳುವ ಕುರಿತಂತೆ ಸಚಿಚ ಸಂಪುಟದ ಉಪ ಸಮಿತಿಯಲ್ಲಿ ಚರ್ಚಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳಿಗೆ ಈ ಬಗ್ಗೆ ಅವಶ್ಯ ಸಲಹೆ ನೀಡಲಾಗಿದ್ದು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಮಾನದಂಡ ನಿಗದಿ ಪಡಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕಲಬುರಗಿಯಲ್ಲಿ ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಖಾಸಗಿ ಬೋರ್ ವೆಲ್ ಬಾಡಿಗೆ ಪಡೆದುಕೊಂಡು ನೀರು ಸರಬರಾಜು ಮಾಡುವುದು, ಹೊಸ ಬೋರ್ ವೆಲ್ ಕೊರೆಸುವುದು ಹಾಗೂ ಟ್ಯಾಂಕರ್ ಮೂಲಕ ನೀರು ಒದಗಿಸುವುದು ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಲು ಈಗಾಗಲೇ ಸೂಚನೆ ನೀಡಲಾಗಿದೆ. ಬರ ಘೋಷಣೆಯಾದರೆ ಬೇಕಾಗುವ ಅನುದಾನಕ್ಕಾಗಿ ಪಿಡಿ ಅಕೌಂಟ್ ನಲ್ಲಿ ಸಾಕಷ್ಟು ಅನುದಾನ ಬಿಡುಗಡೆ ಮಾಡಲು ಕೂಡಾ ಅಗತ್ಯ ಕ್ರಮ ವಹಿಸಲಾಗುತ್ತಿದೆ. ಮುಂದಿನ ವಾರದಲ್ಲಿ ನಡೆಯಲಿರುವ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಈ ಬಗ್ಗೆ ಮತ್ತೆ ಚರ್ಚಿಸಲಾಗುವುದು ಎಂದರು.
ಜನರಿಗೆ ಕುಡಿಯುವ ನೀರು ಒದಗಿಸಲು ಮೊದಲ ಆದ್ಯತೆ ನೀಡಲಾಗುವುದು ನಂತರ ಬೆಳೆಗಳಿಗೆ ಹರಿಸಲು ಯೋಚಿಸಲಾಗುತ್ತದೆ. ನಮ್ಮ ಭಾಗದ ಜನರಿಗೆ ನೀರು ಒದಗಿಸುವ ವಿಚಾರದಲ್ಲಿ ಮಹಾರಾಷ್ಟ್ರ ದಿಂದ ನೀರು ಹರಿಸಲು ಪತ್ರಬರೆಯುವಂತೆ ಸಿಎಂ ಅವರಿಗೆ ಮನವಿ ಮಾಡಲಾಗಿತ್ತು. ಹಾಗಾಗಿ, ಕೃಷ್ಣಾ ನದಿಗೆ ನೀರು ಹರಿಸುವಂತೆ ಈಗಾಗಲೇ ಸಿಎಂ ಮಹಾರಾಷ್ಟ್ರ ರಾಜ್ಯಕ್ಕೆ ಪತ್ರ ಬರೆದಿದ್ದಾರೆ ಅಲ್ಲಿನ ಡ್ಯಾಂ ಗಳಲ್ಲಿ ನೀರಿನ ಲಭ್ಯತೆ ಕುರಿತಂತೆ ಮಹಾರಾಷ್ಟ್ರ ಸರ್ಕಾರ ಅಧಿಕೃತ ಮಾಹಿತಿ ಒದಗಿಸಿಲ್ಲ ಎಂದರು.
ತಮಿಳು ನಾಡಿಗೆ ಸುಪ್ರಿಂ ಕೋರ್ಟ್ ನಿರ್ದೇಶನದಂತೆ ಮಾತ್ರ ರಾಜ್ಯದಿಂದ ನೀರು ಬಿಡುಗಡೆ ಮಾಡಲಾಗಿದೆ. ಕಾವೇರಿಗೆ ಇರುವಷ್ಟು ಮಹತ್ವ ಕೃಷ್ಣಾಗೂ ಇದೆ ಎಂದರು.ರಾಜ್ಯ ಬಜೆಟ್ ಹಲಾಲ್ ಬಜೆಟ್ ಎನ್ನುವ ಬಿಜೆಪಿ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಬಜೆಟ್ ಎಲ್ಲ ವರ್ಗದವರನ್ನು ಗಮನದಲ್ಲಿರಿಸಿಕೊಂಡು ತಯಾರಿಸಲಾಗಿದೆ. ಅನುದಾನ ಬಳಕೆಯೂ ಕೂಡಾ ಅದೇ ಮಾನದಂಡ ಅನುಸರಿಸಿ ಉಪಯೋಗಿಸಲಾಗುತ್ತಿದೆ. ಪ್ರಗತಿ ಪಥ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಗಳಲ್ಲಿ ಆಗುತ್ತಿರುವ ಅಭಿವೃದ್ದಿ ಹಾಗೂ ಗ್ಯಾರಂಟಿ ಯೋಜನೆಗಳು ಕೇವಲ ಮುಸ್ಲಿಮರಿಗೆ ಮಾತ್ರ ಅನ್ವಯವಾಗುತ್ತವಯೇ? ಎಂದು ಟೀಕಿಸಿದರು.
ಬಸನಗೌಡ ಪಾಟೀಲ್ ಯತ್ನಾಳ ಅವರ ಹೆಣಕೂಡ ಕಾಂಗ್ರೆಸ್ ಪಕ್ಷಕ್ಕೆ ಹೋಗಲ್ಲ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ ಅವರು ಆರೋಗ್ಯ ವಂತರಾಗಿರಲಿ. ಅವರ ಸಿದ್ದಾಂತಗಳು ನಮಗೆ ಒಪ್ಪುವುದಿಲ್ಲ, ಅವರು ಪಾರ್ಟಿಗೆ ಬರುವುದು ಬೇಡ. ಅವರ ಈ ಹಿಂದೆ ಯಾವ ಯಾವ ರೀತಿ ಫೋಟೋ ತೆಗೆಸಿಕೊಂಡಿದ್ದರು ಎಂದು ಬಿಜೆಪಿ ಪಕ್ಷದ ಅಧ್ಯಕ್ಷರು ವೈರಲ್ ಮಾಡುತ್ತಿದ್ದಾರಲ್ಲ ಅಷ್ಟೆ ಸಾಕು.ಬಿಜೆಪಿ ಶಾಸಕರ ಸಸ್ಪೆಂಡ್ ವಿಚಾರ, ವಿಧಾನಸಭಾ ಅಧ್ಯಕ್ಷರ ಬಗ್ಗೆ ಅಗೌರವವಾಗಿ ನಡೆದುಕೊಂಡರೆ ಪ್ರಶಸ್ತಿ ಕೊಡಬೇಕಾ? ನಾನಾಗಿದ್ದರೆ ಒಂದು ವರ್ಷ ಸಸ್ಪೆಂಡ್ ಮಾಡುತ್ತಿದ್ದೆ.
ಬಿಜೆಪಿ ಜನಾಕ್ರೋಶ ಯಾತ್ರೆಯನ್ನು ಬೋಗಸ್ ಯಾತ್ರೆ ಎಂದು ಟೀಕಿಸಿದ ಸಚಿವರು, ಕೇಂದ್ರದಿಂದ ರಾಜ್ಯಕ್ಕೆ ಎಷ್ಟು ಅನುದಾನ ಬಂದಿದೆ ಎನ್ನುವ ಬಗ್ಗೆ ಚರ್ಚೆ ನಡೆಸಲಿ. ಅಭಿವೃದ್ದಿ ಕೆಲಸಗಳು ಎಷ್ಟು ನಡೆದಿವೆ ಎನ್ನುವ ಬಗ್ಗೆ ಹೇಳಲಿ. ಜಲಜೀವನ ಮಿಷನ್ ಯೋಜನೆಗೆ ಕೇಂದ್ರ ಹಾಗೂ ರಾಜ್ಯ 50/50 ಅನುಪಾತದಲ್ಲಿ ಅನುದಾನ ಬಿಡುಗಡೆಯಾಗಬೇಕಿತ್ತು. ರೂ 3200 ಕೋಟಿ ಯಲ್ಲಿ ಕೇವಲ ರೂ 517 ಕೋಟಿ ಮಾತ್ರ. ಬಾಕಿ ಹಣ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಬರೆದರೆ, ರಾಜ್ಯ ಸರ್ಕಾರದಿಂದ ಹಣ ಖರ್ಚು ಮಾಡಿದರೆ ಮುಂದಿನ ಆರ್ಥಿಕ ವರ್ಷದಲ್ಲಿ ಬಿಡುಗಡೆ ಮಾಡುವುದಾಗಿ ಉತ್ತರ ಬರೆದಿದ್ದಾರೆ.
ಬಿಜೆಪಿ ಜನಾಕ್ರೋಶ ಯಾತ್ರೆಗೆ ಜೆಡಿಎಸ್ ಗೈರು ಹಾಜರಿ ಬಗ್ಗೆ ಮಾತನಾಡಿ ಅವರು ಯಾರು ಭಾಗಿಯಾಗುತ್ತಾರೋ ಬಿಡುತ್ತಾರೋಅದು ನಮಗೆ ಸಂಬಂಧಪಡದ ವಿಚಾರ. ಅದು ಗಂಡ ಹೆಂಡತಿ ಜಗಳ ಎಂದರು.ರಾಜ್ಯ ಸರ್ಕಾರ ಕಟ್ಟುವ ತೆರಿಗೆಯಿಂದ ರಾಷ್ಟ್ರ ನಡೆಯುತ್ತಿದೆ. ಜಿಎಸ್ ಟಿ ಹಾಗೂ ಐ ಟಿ ತೆರಿಗೆಯಲ್ಲಿ ರಾಜ್ಯ ಎರಡನೆಯ ಸ್ಥಾನದಲ್ಲಿದೆ. ನಾವು ವಾರ್ಷಿಕ ರೂ 4.50 ಲಕ್ಷ ಕೋಟಿ ತೆರಿಗೆ ಕಟ್ಟುತ್ತಿದ್ದೇವೆ ಎಂದರು.
ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆಗೆ ಕೇಂದ್ರ ಸರ್ಕಾರ ಕಚ್ಚಾ ತೈಲದ ಬೆಲೆ ಏರಿಕೆಯೆ ಕಾರಣ. ಕೇಂದ್ರ ಕಚ್ಚಾ ತೈಲದ ಬೆಲೆ ಇಳಿಸಲಿ ಆಗ ಇಲ್ಲಿಯೂ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಇಳಿಯಲಿದೆ. ರಾಷ್ಟ್ರದ ಆರ್ಥಿಕತೆ ನಮ್ಮ ಕೈಲಿಲ್ಲ. ಅವರು ಬೆಲೆ ಜಾಸ್ತಿ ಮಾಡಿದರೆ ಅದು ರಾಷ್ಟ್ರ ಬಲಿಷ್ಠತೆಗೆ ಪೂರಕ ಎನ್ನುತ್ತಾರೆ ನಾವು ಬೆಲೆ ಏರಿಸಿದರೆ ಜನರಿಗೆ ತೊಂದರೆ ಎನ್ನುತ್ತಾರೆ. ಹಾಲಿನ ಬೆಲೆ ಏರಿಕೆಯಿಂದ ರೈತರಿಗೆ ಹಣ ಹೋಗುತ್ತಿದೆ ಎಂದರು.
ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರ ನಡುವೆ ಯಾವುದೇ ಸಂಘರ್ಷ ಇಲ್ಲ ಎಂದ ಸಚಿವರು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ವಿವಿಯ ಕಾನೂನು ತಿದ್ದುಪಡಿ ವಿಧೇಯಕ್ಕೆಕ್ಕೆ ಅಂಕಿತ ಹಾಕಲು ರಾಜ್ಯಪಾಲರು ಅಡ್ಡಿಪಡಿಸುತ್ತಿರುವುದು ಎಷ್ಟು ಸರಿ? ಶಾಸನ ಸಭೆ ಮಾಡಿರುವ ವಿಧೇಯಕಕ್ಕೆ ಅಡ್ಡಿಪಡಿಸಿದರೆ ಶಾಸಕರಾಗಿ ನಾವು ಯಾಕಿರಬೇಕು.? ಸರ್ಕಾರ ಸಂವಿಧಾನ ವಿರೋಧಿ ಕ್ರಮವಹಿಸಿದ್ದರೆ ಕಿವಿ ಹಿಂಡಲಿ. ನಮಗೆ ರಾಜ್ಯಪಾಲರ ಹುದ್ದೆಯ ಬಗ್ಗೆ ಅಪಾರ ಗೌರವವಿದೆ. ನಮಗೆ ಕ್ಲಾರಿಫಿಕೇಷನ್ ಕೇಳಿದ್ದರೆ ಕೊಡುತ್ತಿದ್ದೆವು ಆದರೆ ತಿರಸ್ಕಾರ ಮಾಡಿದ್ದಾರೆ ಎಂದರು.