ಶಿರಸಿ: ಕನ್ನಡದ ಪ್ರಥಮ ರಾಜಧಾನಿ ಬನವಾಸಿಯಲ್ಲಿ ಕದಂಬೋತ್ಸವ- 2025ರ ಅಂಗವಾಗಿ ಕಳೆದ ಎರಡು ದಿನದಿಂದ ಕ್ರೀಡಾಕೂಟ ಮತ್ತು ಸಾಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು, ಶನಿವಾರ ʼಕದಂಬ ಸಾಂಸ್ಕೃತಿಕ ಕಲಾ ಮೆರವಣಿಗೆಯು ಮಧುಕೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡು ಮಯೂರವರ್ಮ ವೇದಿಕೆಯವರೆಗೆ ಸಾಗಿತು. ವಿವಿಧ ಕಲಾಪ್ರಕಾರಗಳನ್ನೊಳಗೊಂಡ ತಂಡಗಳು ಮೆರವಣಿಗೆಗೆ ಭವ್ಯ ಆಕರ್ಷಣೆ ನೀಡಿದವು.
ಮೆರವಣಿಗೆಯಲ್ಲಿ ವಿದ್ಯಾರ್ಥಿನಿಯರ ಪೂರ್ಣಕುಂಭ ಸ್ವಾಗತ, ಬನವಾಸಿಯ ನಾಗಶ್ರೀ ಪ್ರೌಢಶಾಲೆಯ ಸಮವಸ್ತ್ರ ತಂಡ, ಬೇಡರ ವೇಷ, ನರಗುಂದ ಮಹಿಳಾ ತಂಡದ ಡೊಳ್ಳುಕುಣಿತ, ಶಿರಸಿ ತಾಲೂಕಿನ ದೈವಜ್ಞ ಮಹಿಳಾ ಮಂಡಳದ ಚಂಡೆ ವಾದ್ಯ, ಶಿವಶಂಕರ ತುಮಕೂರು ತಂಡದ ಅರೆವಾದ್ಯ, ಆನಂದ ಜೋಗಿಯವರ ಕೀಲುಕುದುರೆ, ಉದಯಕುಮಾರ ಕಾರಬಾಳಿಯ ವೀರಗಾಸೆ, ಹೊನ್ನಾವರದ ಸುಗ್ಗಿ ತಂಡದ ಸುಗ್ಗಿ ಕುಣಿತ, ಡೊಳ್ಳುಚಂದ್ರ ಬೆಂಗಳೂರ ಅವರ ಕೋಳಿ ನೃತ್ಯ ಜನಮನ ರಂಜಿಸಿದವು.
ನಿಖಿಲ ನಾಯಕ ಸಂಗಡಿಗರ ಮರಕಾಲು ನೃತ್ಯ, ಫಕೀರಪ್ಪ ಭಜಂತ್ರಿ ಬನವಾಸಿಯ ಪಂಚವಾದ್ಯ, ಕಲಘಟಗಿಯ ಮಾರಿಕಾಂಬಾ ಯುವತಿ ಸಂಘದ ಲಮಾಣಿ ನೃತ್ಯ, ಮೊಗವಳ್ಳಿಯ ಬಸವೇಶ್ವರ ಡೊಳ್ಳು ಮೇಳದ ಡೊಳ್ಳು ಕುಣಿತ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಯ ರೂಪಕ ತಂಡ ಹಾಗೂ ಇನ್ನಿತರ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.
ಈ ಸುದ್ದಿಯನ್ನೂ ಓದಿ | IRTC: ಏ. 15 ರಿಂದ ತತ್ಕಾಲ್ ಬುಕಿಂಗ್ಗೆ ಹೊಸ ನಿಮಯ ಜಾರಿ
ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೆ. ಕದಂಬ ಜ್ಯೋತಿಗೆ ಚಾಲನೆ ನೀಡಿದರು. ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರ ಕುಮಾರ ಕಾಂದೂ, ಉಪವಿಭಾಗಾಧಿಕಾರಿ ಕೆ.ವಿ.ಕಾವ್ಯಾರಾಣಿ, ತಹಸೀಲ್ದಾರ್ ಶೈಲೇಶ ಪರಮಾನಂದ, ಡಿಡಿಪಿಐ ಬಸವರಾಜ್ ಪಿ, ತಾಲೂಕು ಪಂಚಾಯಿತಿ ಇಒ ಸತೀಶ ಹೆಗಡೆ ಹಾಗೂ ಇತರರು ಇದ್ದರು.