ದೆಹಲಿ
ಕೆಲವು ಕಡೆಗಳಲ್ಲಿ ವರುಣನ ಸಿಂಚನವಾಗಿದ್ದರೂ ಕೂಡ, ಇನ್ನು ಕೆಲವೆಡೆಯಲ್ಲಿ ಬಿಸಿಲಿನ ಝಳವು ಜೋರಾಗಿದೆ. ಮನೆಯ ಹೊರಗೆ ಬಿಡಿ, ಮನೆಯೊಳಗೇ ಇರಲು ಆಗುತ್ತಿಲ್ಲ. ದಿನವಿಡೀ ಫ್ಯಾನ್ ತಿರುಗಿದ್ದರೂ ಸೆಕೆಯನ್ನು ಕಡಿಮೆಯಾಗಲ್ಲ. ಕೆಲವರಂತೂ ಮನೆಗೆ ಎಸಿ ಅಳವಡಿಕೆ ಮಾಡಿ ಪರಿಹಾರ ಕಂಡುಕೊಳ್ಳುತ್ತಾರೆ. ಆದರೆ ಇದೀಗ ದೆಹಲಿ ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲರು ಬಿಸಿಲಿನ ಶಾಖದಿಂದ ಮುಕ್ತಿ ಪಡೆಯಲು ತರಗತಿ ಕೊಠಡಿಗಳಿಗೆ ಸೆಗಣಿ ಲೇಪಿಸುತ್ತಿದ್ದು ಈ ವಿಡಿಯೋವೊಂದು ವೈರಲ್ ಆಗಿದೆ.
ಈ ವಿಡಿಯೋವನ್ನು ಪ್ರೊಫೆಸರ್ ವಿಜೇಂದರ್ ಚೌಹಾಣ್ ಎಕ್ಸ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದೊಂದಿಗೆ, ‘ತರಗತಿಯ ಗೋಡೆಗಳ ಮೇಲೆ ಹಸುವಿನ ಸಗಣಿಯನ್ನು ಲೇಪಿಸಲು ಉತ್ತೇಜಿಸುವ ಕಾಲೇಜಿನ ವಿದ್ಯಾರ್ಥಿಗಳ ನೇಮಕಾತಿ ಅವಕಾಶವನ್ನು ಪ್ರಶ್ನಿಸಿದ್ದಾರೆ. ಒಂದು ವೇಳೆ ನೀವು ಉದ್ಯೋಗದಾತರಾಗಿದ್ದರೆ ಹಾಗೂ ಅಂತಹ ಪ್ರಾಧ್ಯಾಪಕರಿರುವ ಸಂಸ್ಥೆಯಲ್ಲಿ ಅಧ್ಯಯನ ಮಾಡಿದ ಅರ್ಜಿದಾರರನ್ನು ನೇಮಿಸಿಕೊಳ್ಳುತ್ತೀರಾʼ ಎಂದು ಪ್ರಶ್ನೆ ಮಾಡಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ಕಾಲೇಜಿನ ಪ್ರಾಂಶುಪಾಲರು ಸಿಬ್ಬಂದಿಯ ಸಹಾಯದಿಂದ ಗೋಡೆಗಳಿಗೆ ಹಸುವಿನ ಸೆಗಣಿ ಲೇಪಿಸುವುವುದನ್ನು ಕಾಣಬಹುದು ʼ ಸಿ ಬ್ಲಾಕ್ನಲ್ಲಿ ತರಗತಿ ಕೊಠಡಿಯನ್ನು ತಂಪಾಗಿಸಲು ಸ್ಥಳೀಯ ವಿಧಾನಗಳನ್ನು ಬಳಸಲಾಗುತ್ತಿದೆʼ ಎಂದು ಪ್ರಿನ್ಸಿಪಾಲರು ತಿಳಿಸಿದ್ದಾರೆ. ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ನೆಟ್ಟಿಗರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ.
ಈ ವಿಡಿಯೋಗೆ ಬಳಕೆದಾರರೊಬ್ಬರು, ‘ವಿಶ್ವವಿದ್ಯಾನಿಲಯದ ಎಲ್ ಬಿ ಕಾಲೇಜಿನ ಪ್ರಾಂಶುಪಾಲರು ಮೊದಲು ಕಾಲೇಜಿನೊಳಗೆ ಹಸುವನ್ನು ಕಟ್ಟಿ ಹಾಕಿದರು. ಸೆಗಣಿಯನ್ನು ಬಳಸಿಕೊಂಡು ಕಾಲೇಜಿನ ಗೋಡೆಗಳಿಗೆ ಸುಣ್ಣ ಬಳಿಯುವ ಕೆಲಸವೂ ಆರಂಭವಾಗಿದೆ. ಕಾಲೇಜುಗಳಲ್ಲಿ ಗೋಮೂತ್ರ ಕುಡಿಯುವುದನ್ನು ಕಡ್ಡಾಯಗೊಳಿಸಿದರೆ ದೇಶ ವಿಶ್ವಗುರುವಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಎಂದಿದ್ದಾರೆ. ಮತ್ತೊಬ್ಬರು, ‘ಗ್ರಾಮೀಣ ಪ್ರದೇಶದಲ್ಲಿ ಇದು ಸರ್ವೇ ಸಾಮಾನ್ಯವಾಗಿರುತ್ತದೆ. ಇದು ಬೇಸಿಗೆಯಲ್ಲಿ ಕೋಣೆಯನ್ನು ತಂಪಾಗಿರಿಸುತ್ತದೆ ‘ಎಂದಿದ್ದಾರೆ. ಮತ್ತೊರ್ವ ಬಳಕೆದಾರರು, ‘ಇದೇನು ಹಳ್ಳಿ ಮನೆಯಲ್ಲ. ಕಾಲೇಜು ಕೊಠಡಿ ತಂಪಾಗಿರಬೇಕೆಂದು ಬಯಸಿದರೆ, ಎಸಿ ಖರೀದಿಸಿ ‘ ಎಂದು ತಿಳಿಸಿದ್ದಾರೆ.