ನವದೆಹಲಿ:
ಇತ್ತೀಚೆಗೆ ವಕೀಲರ ಎರಡು ಗುಂಪುಗಳು ಕಕ್ಷಿದಾರನ ಕುರಿತಾಗಿ ಕೋರ್ಟ್ ಒಳಗೆ ಕಿತ್ತಾಡಿಕೊಂಡ ಘಟನೆ ನಡೆದಿದೆ. ಈ ಆಘಾತಕಾರಿ ಘಟನೆ ದೆಹಲಿಯ ಕೃಷ್ಣ ನಗರದ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ (ಎಸ್ಇಎಂ) ಕೋರ್ಟ್ನ ಒಳಗೆ ನಡೆದಿದೆಯಂತೆ. ಈ ಘಟನೆಯು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಘಟನೆಯ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಎರಡೂ ಕಡೆಯವರ ವಿರುದ್ಧ ಐಪಿಸಿ ಸೆಕ್ಷನ್ 307 (ಕೊಲೆ ಯತ್ನ) ಮತ್ತು ಐಪಿಸಿ 392 (ದರೋಡೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವೈರಲ್ ಆದ ವಿಡಿಯೊದಲ್ಲಿ ನ್ಯಾಯಾಲಯದ ಒಳಗೆ ಪುರುಷ ಮತ್ತು ಮಹಿಳಾ ವಕೀಲರು ಚಪ್ಪಲಿ ಹಿಡಿದುಕೊಂಡು ಹೊಡೆದಾಡಿದ ದೃಶ್ಯ ಸೆರೆಯಾಗಿದೆ. ಈ ಹೊಡೆದಾಟದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವರದಿ ಪ್ರಕಾರ, ಕಕ್ಷಿದಾರರನ ಕುರಿತಾಗಿ ವಕೀಲರ ಎರಡು ಗುಂಪುಗಳ ನಡುವೆ ಕೋರ್ಟ್ನೊಳಗೆ ಜಗಳ ನಡೆದಿದೆಯಂತೆ. ನಂತರ ಈ ಜಗಳ ವಿಪರೀತಕ್ಕೆ ಹೋಗಿ ಪರಸ್ಪರ ಹೊಡೆದಾಡಿಕೊಂಡಿದ್ದಾರಂತೆ. ಹಾಗಾಗಿ ಎರಡೂ ಕಡೆಯವರ ವಿರುದ್ಧ ಐಪಿಸಿ ಸೆಕ್ಷನ್ 307 (ಕೊಲೆ ಯತ್ನ) ಮತ್ತು ಐಪಿಸಿ 392 (ದರೋಡೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕೋರ್ಟ್ನೊಳಗೆ ವಕೀಲರು ಹೊಡೆದಾಡಿಕೊಂಡ ಘಟನೆ ವೈರಲ್ ಆಗಿದ್ದು ಇದೆ ಮೊದಲಲ್ಲ. ಈ ಹಿಂದೆ ಪಾಕಿಸ್ತಾನದಲ್ಲಿ ಕೇಸ್ ಒಂದು ನ್ಯಾಯಾಲಯದ ಹೊರಗೆ ಇತ್ಯರ್ಥವಾಗಿದ್ದು, ಆದರೆ ಅದು ತಪ್ಪಾಗಿ ಇತ್ಯರ್ಥವಾದ ಕಾರಣ ಪಾಕಿಸ್ತಾನದ ನ್ಯಾಯಾಲಯದ ಹೊರಗೆ ವಕೀಲರು ಮತ್ತು ಅವರ ಕಕ್ಷಿದಾರರ ನಡುವೆ ಹಿಂಸಾತ್ಮಕ ಜಗಳ ನಡೆದಿತ್ತು. ಈ ಆತಂಕಕಾರಿ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ವೈರಲ್ ಆದ ವಿಡಿಯೊದಲ್ಲಿ ನ್ಯಾಯಾಲಯದ ಕಟ್ಟಡದ ಬಳಿಯ ಅಂಗಳಕ್ಕೆ ಬಂದ ವಕೀಲರ ಗುಂಪು ಕುರ್ಚಿಗಳನ್ನು ಎತ್ತಿಕೊಂಡು ಅಲ್ಲಿದ್ದ ಮೂವರು ಕಕ್ಷಿದಾರರ ಮೇಲೆ ದಾಳಿ ಮಾಡಿದ್ದಾರೆ. ಈ ವಾಗ್ವಾದಕ್ಕೆ ಕಾರಣ ಏನು ಎಂಬುದು ಸ್ಪಷ್ಟವಾಗಿಲ್ಲ. ಆದರೆ ಹಿಂಸಾತ್ಮಕವಾದ ಜಗಳವನ್ನು ಕಂಡು ಅಲ್ಲಿದ್ದ ಜನರು ಆಘಾತಗೊಂಡಿದ್ದರು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ವ್ಯಾಪಕ ಆಕ್ರೋಶವನ್ನು ಹುಟ್ಟು ಹಾಕಿತ್ತು. ಅನೇಕರು ಕಾನೂನು ವೃತ್ತಿಯ ನೈತಿಕ ಮಾನದಂಡಗಳನ್ನು ಪ್ರಶ್ನಿಸಿದ್ದಾರೆ.