ಶೃಂಗೇರಿ: ಮಲೆನಾಡು ಭಾಗದ ಹಿರಿಯ ಕಾಂಗ್ರೆಸ್ ನಾಯಕ, ಶೃಂಗೇರಿ ಕ್ಷೇತ್ರದ ಮಾಜಿ ಶಾಸಕ, ಸಚಿವ ಬೇಗಾನೆ ರಾಮಯ್ಯ (90) (Begane Ramaiah) ಅವರು ಗುರುವಾರ ನಿಧನರಾದರು. ಬೇಗಾನೆ ರಾಮಯ್ಯ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಕಳೆದ ಒಂದು ವಾರದ ಹಿಂದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ಬೇಗಾನೆ ರಾಮಯ್ಯ ಅವರಿಗೆ ಪತ್ನಿ ಸೀತಮ್ಮ, ಪುತ್ರ ಅಂಜನ್ ಬೇಗಾನೆ, ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆಯೂ ಆಗಿರುವ ಪುತ್ರಿ ಆರತಿ ಕೃಷ್ಣ ಇದ್ದಾರೆ. ಮೃತರ ಅಂತ್ಯಕ್ರಿಯೆ ಶಿವಮೊಗ್ಗ ಸಮೀಪದ ಹೊಸಹಳ್ಳಿಯ ಸೀತಾ ಫಾರಂನಲ್ಲಿ ಶುಕ್ರವಾರ ನೆರವೇರಲಿದೆ ಎಂದು ಪುತ್ರಿ ಆರತಿ ಕೃಷ್ಣ ತಿಳಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲ್ಲೂಕು ಅಡ್ಡಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇಗಾನೆಯ ಬೆಳ್ಳಪ್ಪ ಗೌಡ ಅವರ ಪುತ್ರ ರಾಮಯ್ಯ ಅವರು ಶೃಂಗೇರಿಯಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಪಡೆದ ನಂತರ ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನಲ್ಲಿ ಪದವಿ, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ, ಸರ್ಕಾರಿ ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದಿದ್ದರು. 1972ರಲ್ಲಿ ಎನ್.ಆರ್. ಪುರ ಘಟಕದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ರಾಜಕೀಯಕ್ಕೆ ಪದಾರ್ಪಣೆ ಮಾಡಿದ್ದರು.
1978ರಲ್ಲಿ ಶೃಂಗೇರಿ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿದ್ದ ಇವರು, ಆರ್. ಗುಂಡೂರಾವ್ ಸಂಪುಟದಲ್ಲಿ ಸಂಪುಟ ದರ್ಜೆಯ ಸಚಿವರಾಗಿದ್ದರು. ಮಲೆನಾಡಿನಲ್ಲಿ ತಲೆದೋರಿದ್ದ ಕುಡಿಯುವ ನೀರಿನ ಅಭಾವ ನೀಗಿಸಲು ಕೊಳವೆಬಾವಿ ಕೊರೆಸಲು ಸಹಕರಿಸಿದ್ದರು. ಹಾಗಾಗಿ, ಅವರನ್ನು ಅಲ್ಲಿನ ಜನರು ಬೋರ್ವೆಲ್ ರಾಮಯ್ಯ ಎಂದೇ ಕರೆಯುತ್ತಿದ್ದರು.
ಈ ಸುದ್ದಿಯನ್ನೂ ಓದಿ | Pahalgam Terror Attack: ಸರ್ವಪಕ್ಷಗಳ ಸಭೆ ; ಪಹಲ್ಗಾಮ್ ಭದ್ರತಾ ಲೋಪ ಒಪ್ಪಿಕೊಂಡ ಕೇಂದ್ರ ಸರ್ಕಾರ