ನವದೆಹಲಿ: ಭಯೋತ್ಪಾದನೆ ವಿಚಾರದಲ್ಲಿ ಕಾಂಗ್ರೆಸ್ ಸಹ ಪಾಕಿಸ್ತಾನದ ರೀತಿಯೇ ಮಾತನಾಡುತ್ತಿದೆ ಎಂದು ಕೇಂದ್ರ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಆರೋಪಿಸಿದ್ದಾರೆ. ಪಹಲ್ಗಾಮ್ ಭಯೋತ್ಪಾದನಾ ದಾಳಿ ಕುರಿತು ಕಾಂಗ್ರೆಸ್ ನಾಯಕರ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಇಬ್ಬಗೆ ನೀತಿ ಪ್ರದಶಿಸುತ್ತಿದೆ ಎಂದು ದೂರಿದ ಅವರು, ಬಹುತೇಕ ಸಂದರ್ಭಗಳಲ್ಲಿ ಕಾಂಗ್ರೆಸ್ ಪಾಕಿಸ್ತಾನದಂತೆಯೇ ಮಾತನಾಡುತ್ತದೆ ಎಂಬುದು ಸ್ಪಷ್ಟವಾಗಿದೆ. ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಪಡಿಸುವಾಗಲೂ ಕಾಂಗ್ರೆಸ್ ನಾಯಕರು ʼಕರಾಳ ದಿನʼ ಎಂದು ಪಾಕಿಸ್ತಾನದ ರೀತಿಯೇ ನಿಲುವು ವ್ಯಕ್ತಪಡಿಸಿದ್ದರು ಎಂದು ಜೋಶಿ ಹರಿಹಾಯ್ದರು.
ಈಗ ಕಾಶ್ಮೀರದ ಪ್ರವಾಸಿ ತಾಣ ಪಹಲ್ಗಾಮ್ನಲ್ಲಿ ಭಯೋತ್ಪಾದಕರು ಅಮಾನುಷ ಕೃತ್ಯ ನಡೆಸಿದ್ದರೂ ಕಾಂಗ್ರೆಸ್ ಪಕ್ಷ ಪಾಕಿಸ್ತಾನದಂತೆಯೇ ಮಾತನಾಡುತ್ತಿದೆ. ಕೆಲವರು ಈ ದಾಳಿಗೆ ಹಿಂದುತ್ವವೇ ಕಾರಣ ಎಂದು ಸಾರ್ವಜನಿಕವಾಗಿ ದೂಷಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರ ಹೇಳಿಕೆಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಯುಪಿಎ ಅವಧಿಯಲ್ಲಿ ಇಡೀ ದೇಶವೇ ನಲುಗಿದೆ
ಯುಪಿಎ ಆಡಳಿತ ಅವಧಿಯಲ್ಲಿ ಇಡೀ ದೇಶವೇ ಭಯೋತ್ಪಾದನೆಯಿಂದ ನಲುಗಿ ಹೋಗಿದೆ. ಕಾಂಗ್ರೆಸ್ಸಿಗರು ಹಳೆಯ ದಾಳಿಗಳನ್ನೊಮ್ಮೆ ನೆನಪಿಸಿಕೊಳ್ಳಲಿ ಎಂದು ಸಚಿವ ಜೋಶಿ ಚಾಟಿ ಬೀಸಿದರು. ಯುಪಿಎ ಆಡಳಿತಾವಧಿಯಲ್ಲಿ ಜಮ್ಮು-ಕಾಶ್ಮೀರ ಒಂದರಲ್ಲೇ ಬರೊಬ್ಬರಿ 11,000ಕ್ಕೂ ಹೆಚ್ಚು ಉಗ್ರರ ದಾಳಿ ಘಟಿಸಿವೆ. 2008ರಲ್ಲಿ ಮುಂಬೈನಲ್ಲಿ ನಡೆದ ಭಯೋತ್ಪಾದನಾ ದಾಳಿ ಯುಪಿಎ ಸರ್ಕಾರದ ಕರಾಳ ಮುಖವನ್ನು ಬಹಿರಂಗಪಡಿಸಿತು ಎಂದು ಜೋಶಿ ತಿರುಗೇಟು ಕೊಟ್ಟಿದ್ದಾರೆ.
ಈ ಸುದ್ದಿಯನ್ನೂ ಓದಿ | Pralhad Joshi: ದೆಹಲಿಯ 5 ರೆಸ್ಟೋರೆಂಟ್ಗಳ ಮೇಲೆ ದೂರು ದಾಖಲು; ಸಿ.ಸಿ.ಪಿ.ಎ. ಕಟ್ಟುನಿಟ್ಟಿನ ಕ್ರಮ: ಜೋಶಿ ಮಾಹಿತಿ
ಈಗ ಶೇ. 70ರಷ್ಟು ಇಳಿದಿದೆ
ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ. 70ರಷ್ಟು ಉಗ್ರ ಚಟುವಟಿಕೆಗಳು ಕಡಿಮೆಯಾಗಿವೆ. ದೇಶದಲ್ಲಿ ಭಯೋತ್ಪಾದನೆ ಪಿಡುಗನ್ನು ಸಂಪೂರ್ಣ ತೊಡೆದು ಹಾಕಲು ನಮ್ಮ ಸರ್ಕಾರ ಪಣ ತೊಟ್ಟಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.