ಬೆಂಗಳೂರು: ರಾಜಧಾನಿ ಬೆಂಗಳೂರಿನ ವಿವಿಧೆಡೆ ಗುರುವಾರ ರಾತ್ರಿ ಗುಡುಗು ಸಹಿತ ಮಳೆ ಅಬ್ಬರಿಸಿದ್ದು, ಭಾರಿ ಅವಾಂತರ ಸೃಷ್ಟಿಯಾಗಿದೆ. ಇನ್ನು ನಗರದ ಕತ್ರಿಗುಪ್ಪೆಯ ಎಂಎಂ ಬಾರ್ ಬಳಿ ಆಟೋ ಮೇಲೆ ಮರ ಬಿದ್ದು ಇಟ್ಟುಮಡು ನಿವಾಸಿ, ಚಾಲಕ ಮಹೇಶ್(45) ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ನಗರದ ಮೆಜೆಸ್ಟಿಕ್, ಶಿವಾನಂದ ಸರ್ಕಲ್, ಮೈಸೂರು ಬ್ಯಾಂಕ್ ಸರ್ಕಲ್, ಶೇಷಾದ್ರಿಪುರಂ, ವಿಧಾನಸೌಧ, ಕೆ.ಆರ್. ಸರ್ಕಲ್, ಕೆ.ಆರ್.ಮಾರ್ಕೆಟ್, ಟೌನ್ ಹಾಲ್, ಮಲ್ಲೇಶ್ವರ, ಯಶವಂತಪುರ, ಕಾರ್ಪೋರೇಷನ್ ಸರ್ಕಲ್, ಬಸವೇಶ್ವರ ನಗರ, ರಾಜಾಜಿ ನಗರ, ವಿಜಯ ನಗರ, ಕೋರಮಂಗಲ, ಶಾಂತಿನಗರ, ರಿಚ್ಮಂಡ್ ಟೌನ್ ಸೇರಿ ವಿವಿಧ ಭಾಗಗಳಲ್ಲಿ ಬಿರುಸಿನ ಮಳೆ ಸುರಿದಿದ್ದು, ಪ್ರಮುಖ ರಸ್ತೆಗಳಲ್ಲಿ ಜಲಾವೃತವಾಗಿದ್ದರಿಂದ ಸಂಚಾರ ಅಸ್ತವ್ಯಸ್ತವಾಗಿದೆ.
ಈ ಸುದ್ದಿಯನ್ನೂ ಓದಿ | Tumkur News: ತುಮಕೂರಿನಲ್ಲಿ 4 ಅಡಿ ಉದ್ದದ ಕೊಳಕುಮಂಡಲ, 43 ಮರಿಗಳ ರಕ್ಷಣೆ!
ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ನಗರದ ಹಲವೆಡೆ ಸಂಚಾರ ದಟ್ಟಣೆ ಉಂಟಾಗಿತ್ತು. ಜ್ಞಾನಭಾರತಿ ಹತ್ತಿರ ರಸ್ತೆಯಲ್ಲಿ ಭಾರಿ ಪ್ರಮಾಣದ ನೀರು ನಿಂತಿದ್ದರಿಂದ ಆರ್ಆರ್ನಗರ ಕಡೆಗೆ ನಿಧಾನಗತಿಯ ಸಂಚಾರವಿತ್ತು. ತಾವರೆಕೆರೆ ಹತ್ತಿರ ಮರ ಬಿದ್ದಿರುವುದರಿಂದ ನಿಮಾನ್ಸ್ ಆಸ್ಪತ್ರೆ ಕಡೆಗೆ ನಿಧಾನಗತಿಯ ಸಂಚಾರವಿತ್ತು.
ಹೆಬ್ಬಾಳ ಪೊಲೀಸ್ ಠಾಣೆಯಿಂದ ವಿಮಾನ ನಿಲ್ದಾಣದ ಕಡೆಗೆ, ಆರ್ಪಿ ರಸ್ತೆಯಿಂದ ಪಿಜಿ ಹಳ್ಳಿ ಕಡೆಗೆ, ವರ್ತೂರು ಕಡೆಯಿಂದ ಗುಂಜೂರು ಕಡೆಗೆ, ಭಾಷ್ಯಂ ವೃತ್ತದಿಂದ ಕಾವೇರಿ ಕಡೆಗೆ, ಉದಯ ಟಿವಿ ಜಂಕ್ಷನ್ ಕಡೆಯಿಂದ ಜಯಮಹಲ್ ರಸ್ತೆ ಕಡೆಗೆ, ಬಿಳೇಕಹಳ್ಳಿಯಿಂದ ಜೆ ಡಿ ಮರದ ಕಡೆಗೆ, ವೀರಸಂದ್ರ ಎರಡೂ ಬದಿ ರಸ್ತೆ, ಹೊಸ ರಸ್ತೆಯಿಂದ ಬಸಾಪುರ ಜಂಕ್ಷನ್ ಕಡೆಗೆ, ಹೊರಮಾವು ಕೆಳಸೇತುವೆಯಿಂದ ಕೆ.ಆರ್ ಪುರ ಕಡೆಗೆ ಭಾರಿ ಸಂಚಾರ ದಟ್ಟಣೆ ಉಂಟಾಗಿದ್ದರಿಂದ ವಾಹನ ಸವಾರರು ಪರದಾಡಿದರು.