Karunadu Studio

ಕರ್ನಾಟಕ

Shishir Hegde Column: ಊರವರೆಲ್ಲ ಉಗ್ರಗಾಮಿಗಳಾದರೆ ಏನು ಮಾಡಬೇಕು ? – Kannada News | What should we do if all the villagers are terrorists?


ಶಿಶಿರಕಾಲ

shishirh@gmail.com

ಕಾಶ್ಮೀರದಲ್ಲಿ ಹಿಂದಿನವಾರ ನಡೆದ ಇಸ್ಲಾಮಿಕ್ ಉಗ್ರಗಾಮಿಗಳ ದಾಳಿಯ ಸುದ್ದಿ ಮನಸ್ಸನ್ನು ಕದಡಿದೆ. ಸತ್ತವರು ಸಂಬಂಧಿಯೇನಲ್ಲ. ಅವರೆಲ್ಲ ಬದುಕಿದ್ದರೆ ಜೀವಮಾನದಲ್ಲಿ ಸಂಧಿಸುವ ಸಾಧ್ಯತೆಯೂ ಇರಲಿಲ್ಲ. ಆದರೂ ಮಣಭಾರ ಭಾವ. ಕಳೆದ ಐದಾರು ವರ್ಷದಿಂದ ಸಾಂಕ್ರಾಮಿಕ ರೋಗ, ಯುದ್ಧ, ಭಯೋತ್ಪಾದನೆ, ವಾತಾವರಣ ವೈಪರೀತ್ಯ ಏನೇನೆಲ್ಲ ಸುದ್ದಿ ಕೇಳುತ್ತಲೇ ಇದ್ದೇವೆ. ಸಾವನ್ನು ಸಾವಿರದ ಲೆಕ್ಕದಲ್ಲಿ ಎಣಿಸುವ ಹಲವು ಸುದ್ದಿಗಳ ನಡುವೆಯೂ, 26 ಸಣ್ಣ ಸಂಖ್ಯೆಯಂತೆ ಕಾಣಿಸುತ್ತಿಲ್ಲ.

ಕಾಶ್ಮೀರದಿಂದ ಬಂದ ವಿಡಿಯೊಗಳಲ್ಲಿ ಒಂದು ಮಾತ್ರ ನನ್ನನ್ನು ಎಲ್ಲಿಲ್ಲದಂತೆ ನಿರಂತರ ಕಾಡು ತ್ತಿದೆ. ಅದು ಅಲ್ಲಿನ ‘ಜಿಪ್‌ಲೈನ್’ ನಿಭಾಯಿಸುತ್ತಿದ್ದ ಕಾಶ್ಮೀರಿಯೊಬ್ಬನದು. ಗುಂಡಿನ ಶಬ್ದಗಳನ್ನು ಕೇಳಿದ ನಂತರವೂ ಪ್ರವಾಸಿಯನ್ನು ದೂಡಿ ಬಿಡುವ ಸನ್ನಿವೇಶ. ಮೊಬೈಲ್ ವಿಡಿಯೋದಲ್ಲಿಯೇ ಗುಂಡಿನ ಶಬ್ದ ಅಷ್ಟು ಸ್ಪಷ್ಟ ಕೇಳುವಾಗ ಅವನಿಗೆ ಕೇಳದಿರಲು ಸಾಧ್ಯವೇ? ‘ಅಹು ಅಕ್ಬರ್’ ಎಂದು ಆತ ಹೇಳಿದ್ದು ‘ಮೂರು’ ಬಾರಿ.

ಆನಂತರದಲ್ಲಿ ಕೂಡ ಒಂಚೂರೂ ವಿಚಲಿತನಾಗದೆ, ಹಿಂದಕ್ಕೆ ತಿರುಗುವ ದೃಶ್ಯ. ಅವನಿಗೆ ಗುಂಡಿನ ಶಬ್ದ ಕೇಳಿದ್ದೇ ಆದಲ್ಲಿ, ಆತನಿಗೆ ಇದೆಲ್ಲ ತಿಳಿದಿದ್ದದ್ದೇ ಆದಲ್ಲಿ ಆತನೂ ಉಗ್ರಗಾಮಿಯೇ. ಹಾಗಂತ ನ್ಯಾಯಾಲಯದಲ್ಲಿ ಆತನಿಗೆ ಶಿಕ್ಷೆಯಾಗಲಿಕ್ಕಿಲ್ಲ. ಕೇಳಿ ಮಾಡಿದ್ದೇ ಆದರೂ ‘ತನಗೆ ಕೇಳಿಲ್ಲ’ ಎಂದು ಹೇಳಿದರೆ ಸುಲಭದಲ್ಲಿ ಖುಲಾಸೆ.

ಇದನ್ನೂ ಓದಿ: Shishir Hegde Column: ಸಾವನ್ನು ಮುಂದೂಡುವ ಶ್ರೀಮಂತರ ಪ್ರಯೋಗಗಳು

ಒಂದಂತೂ ಸಾರ್ವಕಾಲಿಕ ಸತ್ಯ- ಯಾವುದೇ ದೇಶವಿರಲಿ, ನೆಲವಿರಲಿ, ವ್ಯವಸ್ಥೆಯಿರಲಿ, ಅಲ್ಲಿನ ಜೈಲಿನ ಒಳಗಿರುವ ಕ್ರಿಮಿನಲ್‌ಗಳಿಗಿಂತ ಹೊರಗಿರುವವರ ಸಂಖ್ಯೆಯೇ ಜಾಸ್ತಿ ಇರುತ್ತದೆ. ಕಾಶ್ಮೀರದ ಉಗ್ರಗಾಮಿಗಳ ಮಟ್ಟಿಗೂ ಇದೇ ವಾಕ್ಯ ಲಾಗುವಾಗುತ್ತದೆ. ಕಾಶ್ಮೀರದಲ್ಲಿ ಗುರುತಿಸಲಾಗದ ಉಗ್ರಗಾ ಮಿಗಳೇ ಊರಿಡೀ ತುಂಬಿಕೊಂಡಂತೆ ಅನಿಸುವುದು ಸುಳ್ಳಲ್ಲ. ಕಾಶ್ಮೀರದ್ದು ಇಸ್ಲಾಮಿಕ್ ಭಯೋ ತ್ಪಾದನೆ.

ಕಾಶ್ಮೀರಿ ಮುಸಲ್ಮಾನರು- ನಾವು ಕಾಶ್ಮೀರಿಗಳು ನೀವು ಭಾರತೀಯರು ಎನ್ನುವುದನ್ನೂ ಸಹಿಸ ಬಹುದು. ಆದರೆ ಇಂಥ ಸನ್ನಿವೇಶಗಳಲ್ಲಿ ಅವರ ನಡವಳಿಕೆ, ಹೇಳಿಕೆಗಳು? ಕ್ರಿಯೆಗೆ ಶಿಕ್ಷಿಸ ಬಹುದು, ಆದರೆ ಸಾರ್ವಜನಿಕ ದೇಶದ್ರೋಹಿ, ಉಗ್ರಗಾಮಿ ಮನೋಭಾವಕ್ಕೆ? ಕಾನೂನಿನ ಪ್ರಕಾರ ಎಲ್ಲದನ್ನೂ ಶಿಕ್ಷಿಸಿ ಸಮಾಜವನ್ನೇ ಸರಿಮಾಡಲು ಸಾಧ್ಯವೇ? ಕಾನೂನಿಗೆ ಆ ಶಕ್ತಿ ಇದೆಯೇ? ಎಲ್ಲಾ ಒಂದೆರಡು ಮಂದಿ ಹೀಗೆ ದೇಶದ್ರೋಹಿಗಳಾದರೆ ಕಾನೂನು, ಶಿಕ್ಷೆ ಇವೆಲ್ಲ ಸಾಧ್ಯ.

ಆದರೆ ಸಮಾಜದ ಬಹುತೇಕರು ಕ್ರಿಮಿನಲ್ ಅಥವಾ ಉಗ್ರಗಾಮಿಗಳಾಗಿ ಬಿಟ್ಟರೆ? ಇಸ್ಲಾಮಿಕ್ ಭಯೋತ್ಪಾದನೆಯೇ ಬೇರೆ- ಉಳಿದೆಲ್ಲಾ ಅಪರಾಧಗಳೇ ಬೇರೆ. ಉಗ್ರಗಾಮಿಗಳೇ ಬೇರೆ, ಕಳ್ಳ, ಸುಳ್ಳ, ದರೋಡೆಕೋರ, ಅತ್ಯಾಚಾರಿ, ಕೊಲೆಗಾರರೇ ಬೇರೆ. ಆದರೆ ಇಡೀ ಸಮಾಜದ ಬಹುಪಾಲು ಮಂದಿ ಉಗ್ರಗಾಮಿಗಳ ಜತೆ ಅಥವಾ ಮಾಫಿಯಾಗಳ ಜತೆ ಸೇರಿಕೊಂಡು ಬಿಟ್ಟರೆ? ಎಷ್ಟೆಂದು ಬಂಧಿಸು ವುದು- ಎಷ್ಟು ಜನರನ್ನು ಜೈಲಿಗೆ ಹಾಕುವುದು? ಅಂತಲ್ಲಿ ಸಭ್ಯ ದೇಶ ಕಟ್ಟಿಕೊಂಡ ಸರಕಾರಿ ಆಡಳಿತ ವ್ಯವಸ್ಥೆ ಗೆಲ್ಲಲು ಸಾಧ್ಯವೇ? ಈ ಕಥೆ ಶುರುವಾಗುವುದು ‘ಎಲ್ ಸೆಲ್ವಾಡೋರ್’ ಎಂಬ ಚಿಕ್ಕ ದೇಶದಿಂದ. ಅದಿರುವುದು ಅಮೆರಿಕದಿಂದ ದಕ್ಷಿಣಕ್ಕೆ.

ಅಮೆರಿಕ ಮತ್ತು ಎಲ್ ಸೆಲ್ವಾಡೋರ್ ನಡುವೆ ಎರಡು ದೇಶಗಳಿವೆ. ವಿಸ್ತಾರ ಮೆಕ್ಸಿಕೋ, ಅದನ್ನು ದಾಟಿದರೆ ಗ್ವಾಟೆಮಾಲ- ಅಲ್ಲಿಂದ ದಕ್ಷಿಣಕ್ಕೆ ಎಲ್ ಸೆಲ್ವಾಡೋರ್. ಈ ದೇಶದ ಹೆಸರು ಸೆಲ್ವಾ ಡೋರ್, ಸ್ಪ್ಯಾನಿಷ್ ಭಾಷೆಯಲ್ಲಿ ‘ಎಲ್’ ಎಂದರೆ ಇಂಗ್ಲಿಷಿನ The. ಹಾಗಾಗಿ ಇದು ದಿ ಸೆಲ್ವಾ ಡೋರ್- ಅಥವಾ ಸುಲಭದಲ್ಲಿ ಹೇಳುವುದಾದರೆ ಸೆಲ್ವಾಡೋರ್. ‌

ಸೆಲ್ವಾಡೋರ್ ಒಂದು ಬಡ, ಶಾಪಗ್ರಸ್ತ ದೇಶ. ಹೆಚ್ಚು ದೊಡ್ಡದೇನಲ್ಲ, ಉತ್ತರ ಕನ್ನಡ ಮತ್ತು ಬೆಳಗಾವಿ ಎರಡು ಜಿಲ್ಲೆ ಸೇರಿಸಿದಷ್ಟು ಅಳತೆ. ಜನಸಂಖ್ಯೆ ಈಗ 60-65 ಲಕ್ಷ ಜನಸಂಖ್ಯೆ. ಶಾಪಗ್ರಸ್ತ ಎನ್ನಲು ಕಾರಣವಿದೆ. 1821ರಲ್ಲಿಯೇ ಸ್ಪೇನ್‌ನಿಂದ ಸ್ವಾತಂತ್ರ್ಯ ಪಡೆದ ದೇಶ ಅಲ್ಲಿಂದ ಮುಂದೆ ಕಂಡದ್ದು ಬೇಕಾಬಿಟ್ಟಿ ದುರಾಡಳಿತ. 1930ರಿಂದ 1970ರವರೆಗೂ ಈ ದೇಶವನ್ನು ಆಳಿದ್ದು ಪರಮ ನೀಚ ಶ್ರೀಮಂತರು ಮತ್ತು ಮಿಲಿಟರಿ ಜನರಲ್‌ಗಳು.

ತರುವಾಯ 70ರ ದಶಕದಲ್ಲಿ ದುರಾಡಳಿತದ ವಿರುದ್ಧ ಜನರು ಬಂಡೆದ್ದರು. 1980ರ ಆಸುಪಾಸಿ ನಲ್ಲಿ ಅಲ್ಲಿನ ಆಂತರಿಕ ಯುದ್ಧ ತಾರಕ ಸ್ಥಿತಿ ಮುಟ್ಟಿತ್ತು. ಕೊಲೆ, ಅತ್ಯಾಚಾರ, ಸುಲಿಗೆ- ಬದುಕ ಬೇಕೆಂದರೆ ದೇಶ ಬಿಡಬೇಕು.

ಅಂಥ ಸ್ಥಿತಿಯ ನಿರಾಶ್ರಿತರಿಗೆ ಅಮೆರಿಕ ಬಾಗಿಲು ತೆರೆಯಿತು. ಸೆಲ್ವಾಡೋರ್‌ನಲ್ಲಿ ಆಗ ಇದ್ದ ಜನಸಂಖ್ಯೆ 45 ಲಕ್ಷ. ಅದರಲ್ಲಿ ಶೇ.10, ಸುಮಾರು 5 ಲಕ್ಷ ಮಂದಿ ಎರಡು ದೇಶ ದಾಟಿ ಅಮೆರಿಕದಲ್ಲಿ ಆಶ್ರಯ ಪಡೆದರು. ಅವರಲ್ಲಿ ಅರ್ಧಕ್ಕರ್ಧ ಜನ ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ ನಲ್ಲೇ ನೆಲೆಯಾದರೆ ಇನ್ನರ್ಧದಷ್ಟು ಮಂದಿ ಅಮೆರಿಕದಾದ್ಯಂತ ಹರಡಿಕೊಂಡರು. ಅಂದು ಹಾಗೆ ಅಮೆರಿಕದೊಳಕ್ಕೆ ಬಂದವರಲ್ಲಿ ಎಲ್ಲರೂ ಸಂಭಾವಿತರಿರಲಿಲ್ಲ. ಜನಸಾಮಾನ್ಯರ ಜತೆ ಗ್ಯಾಂಗ್‌ ಸ್ಟರ್, ಅಪರಾಧಿಗಳು, ಮಾಫಿಯಾದವರು ಹೀಗೆ ಎಲ್ಲರೂ ಇದ್ದರು.

ಈ ಪ್ರಮಾಣದಲ್ಲಿ ಸೆಲ್ವಾಡೋರ್‌ನಿಂದ ಅಮೆರಿಕದೊಳಕ್ಕೆ ಹೊಕ್ಕವರ ಬದುಕು ಸುಲಭದ್ದಿರಲಿಲ್ಲ. ಆಶ್ರಯ, ಉದ್ಯೋಗ ಎಲ್ಲದಕ್ಕೂ ಕಷ್ಟ. ಅಷ್ಟೇ ಅಲ್ಲ, ಅಮೆರಿಕನ್ನರು ಅವರನ್ನು ಹೊರಗಿನವರಾಗಿ ಯೇ ಕಂಡರು. ಅವರನ್ನು ಲಾಸ್ ಏಂಜಲೀಸ್‌ನ ಒಂದಿಷ್ಟು ಕಡುಬಡವ ಜಾಗಕ್ಕಷ್ಟೇ ಸೀಮಿತ ಗೊಳಿಸಿದರು. ಹೀಗೆ ನಿರಾಶ್ರಿತರಾಗಿ ಅಮೆರಿಕದೊಳಕ್ಕೆ ಬಂದ ಸೆಲ್ವಾಡೋರಿಯನ್ನರ ಬದುಕು ದುಸ್ತರವೇ ಇತ್ತು. ಬಡದೇಶದಲ್ಲಿ ಬಡವರಾಗಿರುವುದಕ್ಕಿಂತ ಶ್ರೀಮಂತರ ದೇಶದಲ್ಲಿ ಬಡವರಾಗು ವುದು ಇನ್ನಷ್ಟು ಭೀಕರ.

ಸೆಲ್ವಾಡೋರ್ ನಿರಾಶ್ರಿತರು ಅಮೆರಿಕದಲ್ಲಿ ಶೋಷಣೆಗೊಳಗಾದರೂ. ಆಗ ರಕ್ಷಣೆಗೆಂದು ತಮ್ಮ ಗುಂಪುಕಟ್ಟಿಕೊಂಡರು. ಆ ಗುಂಪು ಮೊದಮೊದಲು ಸೆಲ್ವಾಡೋರ್ ವಲಸಿಗರ ರಕ್ಷಣೆಯನ್ನೇನೋ ಮಾಡಿತು. ಆದರೆ ಕ್ರಮೇಣ ಬಡತನ ಇತ್ಯಾದಿಯಿಂದಾಗಿ ಕ್ರಿಮಿನಲ್ ವ್ಯವಹಾರಕ್ಕೆ ಇಳಿಯಿತು. ಈ ರಕ್ಷಕ ಗುಂಪು ಅಮೆರಿಕದಲ್ಲಿ ನೋಡನೋಡುತ್ತಲೇ ಕೊಲೆ, ಸುಲಿಗೆ, ದಬ್ಬಾಳಿಕೆ, ಅತ್ಯಾಚಾರ ಇತ್ಯಾದಿ ಶುರುವಿಟ್ಟುಕೊಂಡು ಬಿಟ್ಟಿತು.

ಹೀಗೆ ಅಮೆರಿಕಕ್ಕೆ ಬಂದ ಹತ್ತೇ ವರ್ಷದೊಳಗೆ, 1990ರ ವೇಳೆ ಸೆಲ್ವಾಡೋರ್ ಗ್ಯಾಂಗ್‌ಗಳ ಕ್ರೌರ್ಯ, ಅಪರಾಧಗಳು ಅಮೆರಿಕದಲ್ಲಿ ಮಿತಿಮೀರಿ ಬಿಟ್ಟಿದ್ದವು. ಅಮೆರಿಕನ್ ಪೊಲೀಸ್ ವ್ಯವಸ್ಥೆಗೇ ಸವಾಲಾಗುವಷ್ಟು. ಆ ಗ್ಯಾಂಗ್‌ಗಳಲ್ಲಿ ಅತ್ಯಂತ ಬಲಿಷ್ಠವಾಗಿ ಬೆಳೆದ ಗ್ಯಾಂಗ್ Mara Salvatrucha (MS-13) . ಎಂಎಸ್-13 ಎಂದೇ ಕುಖ್ಯಾತ. ಈ ಗ್ಯಾಂಗಿನ ಹೆಸರಿನ ರಚನೆಯ ಬಗ್ಗೆ ಸ್ವಲ್ಪ ಹೇಳಿ ಮುಂದುವರಿಯುತ್ತೇನೆ. Mara – ಎಂದರೆ ‘ಮಾರಾಬುಂಟಾ’ ಒಂದು ಜಾತಿಯ ಆಕ್ರಮಣಕಾರಿ ಇರುವೆ. Salva ಎಂದರೆ ಸೆಲ್ವಾಡೋರ್. Trucha ಎಂದರೆ Street Smart ಬುದ್ಧಿವಂತ. ಅದೆಲ್ಲ ಸರಿ Mara Salvatrucha. ಈ ಗ್ಯಾಂಗ್ ಅಮೆರಿಕದೊಳಕ್ಕೆ ಬೆಳೆದದ್ದಷ್ಟೇ ಅಲ್ಲ, ಪಕ್ಕದ ದೇಶ ಮೆಕ್ಸಿಕೋ- ಅಲ್ಲಿನ ಮಾಫಿಯಾ, ಡ್ರಗ್ ಜಾಲದ ಜತೆ ಒಡಂಬಡಿಕೆ ಮಾಡಿಕೊಂಡಿತು.

ಸ್ನೇಹವೂ ಬೆಳೆಯಿತು. ಆ ಗ್ಯಾಂಗ್‌ನ ಸ್ನೇಹದ ಗುರುತಾಗಿ ಮೆಕ್ಸಿಕ್ ಮಾಫಿಯಾದಿಂದ ‘M’ ತೆಗೆದು ಕೊಂಡು ಇವರ ಹೆಸರಿನ ಜತೆ ಸೇರಿಸಿಕೊಂಡರು. M ಇಂಗ್ಲಿಷಿನ 13ನೇ ಶಬ್ದ. ಆ ನಂಬರ್ ಅನ್ನು ಮುಂದಕ್ಕೆ ಸೇರಿಸಿಕೊಂಡು ಈ ಗ್ಯಾಂಗ್ Mara Salvatrucha (MS-13). ನಾನಂತೂ ಒಂದು ಮಾಫಿಯಾ ಇಷ್ಟು ಕ್ರಿಯಾತ್ಮಕವಾಗಿ ಹೆಸರಿಟ್ಟುಕೊಂಡದ್ದು ಬೇರೆಡೆ ಕಂಡಿಲ್ಲ. ಇರಲಿ, ಇದೆಲ್ಲ ನಡೆದದ್ದು ಏಳೆಂಟು ವರ್ಷದಲ್ಲಿ- ಅಮೆರಿಕದಲ್ಲಿ. 1990. ಈಗ ಅಮೆರಿಕ ಜಾಗೃತವಾಯಿತು.

ತನ್ನ ನೆಲದಲ್ಲಿ ಇಂಥ ಉಪಟಳಕ್ಕೆ ಕಾರಣವಾದ ಆ ಗ್ಯಾಂಗಿನ ಸದಸ್ಯರನ್ನು ಬಂಧಿಸಿ ಎಲ್ ಸೆಲ್ವಾ ಡೋರ್‌ಗೆ ಗಡಿಪಾರು ಮಾಡಿತು. ಹೀಗೆ ಒಂದು ಸುವವಸ್ಥಿತ ಗ್ಯಾಂಗ್ ಸರಕಾರಿ ವ್ಯವಸ್ಥೆಯಡಿ ಯಲ್ಲಿ ರಿಲೋಕೇಶನ್- ಸೆಲ್ವಾಡೋರ್‌ಗೆ ಸ್ಥಳಾಂತರ ವಾಯಿತು. ಈ ರೀತಿ ಗಡಿಪಾರು ಮಾಡುವಾಗ ಕೆಲವರು ತಪ್ಪಿಸಿಕೊಂಡು ಅಮೆರಿಕದಲ್ಲಿಯೇ ಉಳಿದರು. ಹೀಗೆ ಒಂದರ್ಧ ಗ್ಯಾಂಗ್ ಇಲ್ಲಿ ಉಳಿ ಯಿತು, ಇನ್ನೊಂದರ್ಧ ಗ್ಯಾಂಗ್ ಸೆಲ್ವಾಡೋರ್‌ಗೆ ಮರಳಿತು.

ಆ ರೀತಿ ಸೆಲ್ವಾಡೋರ್ ತಲುಪಿದ MS-13 ಗ್ಯಾಂಗಿನವರು ಅಲ್ಲಿಯೂ ತಮ್ಮ ವಿಪರೀತ ಕ್ರೌರ್ಯ ಶುರುಮಾಡಿಕೊಂಡರು. ಬೇರೆ ದೇಶದಲ್ಲಿ ಹೋಗಿ ಕಂಪನಿ ಸ್ಥಾಪಿಸಿದಂತೆ ಸುಲಿಗೆ, ಕೊಲೆ, ಅತ್ಯಾ ಚಾರ. ಮೊದಲೇ ಆಂತರಿಕ ಕಲಹದಿಂದ ಮೂರಾಬಟ್ಟೆಯಾಗಿದ್ದ ದೇಶ ಸೆಲ್ವಾಡೋರ್. ಅಷ್ಟು ಪುಟ್ಟ ದೇಶದಲ್ಲಿ ಆಂತರಿಕ ಕಲಹದಲ್ಲಿ ಸತ್ತವರ ಸಂಖ್ಯೆಯೇ ಲಕ್ಷದ ಆಸುಪಾಸು.

45 ಲಕ್ಷ ಜನಸಂಖ್ಯೆಯಲ್ಲಿ ಒಂದು ಲಕ್ಷ ಸಾಯುವುದೆಂದರೆ ಭೀಕರತೆಯನ್ನು ಊಹಿಸಿಕೊಳ್ಳಬೇಕು. ದೇಶದ ಶೇ.99ಕ್ಕೂ ಮೀರಿದವರು ಕಡುಬಡವರು. ಸೆಲ್ವಾಡೋರ್‌ನ ಸರಕಾರ, ಸೇನೆ, ಪೊಲೀಸ್ ವ್ಯವಸ್ಥೆ ಎಲ್ಲವನ್ನೂ ನಪುಂಸಕವಾಗಿಸುವಷ್ಟು ಈ MS-13 ಬೆಳೆಯಿತು. ಈ ಗ್ಯಾಂಗಿನವರು ಬರೀ ಸುಲಿಗೆಯನ್ನಷ್ಟೇ ಮಾಡಿ ಸುಮ್ಮನಾಗಲಿಲ್ಲ.

ಬದಲಿಗೆ ಒಂದು ಊರು ಗುರುತು ಮಾಡುವುದು, ಅಲ್ಲಿಗೆ ದಾಳಿಯಿಡುವುದು ಮತ್ತು ಅಲ್ಲಿ 12-13 ಮೀರಿದ ಗಂಡುಮಕ್ಕಳಿದ್ದರೆ ಗ್ಯಾಂಗಿಗೆ ಸೇರಿಸಿಕೊಳ್ಳುವುದು, ಹೆಣ್ಣುಮಕ್ಕಳಾದರೆ ಗ್ಯಾಂಗ್ ಸೇರಬೇಕು ಅಥವಾ ಗ್ಯಾಂಗ್ ರೇಪ್! 1995ರಲ್ಲಿ ಸುಮಾರು ಒಂದೆರಡು ಸಾವಿರದಷ್ಟು ದುರುಳರಿದ್ದ ಗ್ಯಾಂಗ್ 2000ನೇ ಇಸವಿ ತಲುಪುವಾಗ 10 ಸಾವಿರವಾಯಿತು. MS-13 ನಿಂದ ಹೊರಬಂದವರು ಇನ್ನೊಂದಿ ಷ್ಟು ಗ್ಯಾಂಗ್ ಆರಂಭಿಸಿದರು. MS-13 ಗೆ ಪ್ರಬಲ ವಿರೋಧಿಯಾಗಿ Barrio 18 ಎಂಬ ಇನ್ನೊಂದು ಗ್ಯಾಂಗ್ ಸಮಾನಾಂತರವಾಗಿ ಬೆಳೆಯಿತು.

ಒಟ್ಟಾರೆ 2019ರ ವೇಳೆಗೆ ಎಲ್ ಸೆಲ್ವಾಡೋರ್‌ನಲ್ಲಿದ್ದದ್ದು ಒಂದು ಲಕ್ಷ ಮಾಫಿಯಾ ಸದಸ್ಯರು! ಅಲ್ಲಿನ ಜನಸಂಖ್ಯೆ ಆಗ ಎಷ್ಟು ಹೇಳಿ? 50 ಲಕ್ಷ. ಐವತ್ತರಲ್ಲಿ ಒಬ್ಬ ಮಾಫಿಯಾ. ಜನಸಂಖ್ಯೆಯ ಶೇ.10ರಷ್ಟು ಮಂದಿ ಒಂದ ಒಂದು ಮಾಫಿಯಾದ ಭಾಗವಾಗಿದ್ದರು ಎಂದರೆ ವ್ಯವಸ್ಥೆಯ ಅವ್ಯವಸ್ಥೆ ಹೇಗಿರಬೇಕು ಊಹಿಸಿ!

ಈ ರೀತಿ ಎಳವೆಯಲ್ಲಿಯೇ ಗ್ಯಾಂಗ್ ಸೇರಿದ ಹುಡುಗ ಹುಡುಗಿಯರ ಕ್ರೌರ್ಯಕ್ಕೆ ಮಿತಿಯೇ ಇರಲಿಲ್ಲ. ಅವರೆಲ್ಲ ಅದೆಷ್ಟು ಅಮಾನವೀಯವಾಗಿಬಿಟ್ಟರು ಎಂದರೆ ಒಬ್ಬೊಬ್ಬರು ಏನಿಲ್ಲವೆಂದರೂ 15-20 ಮಂದಿಯನ್ನು ಕೊಂದವರು. ಯಾರು ಎಷ್ಟು ಜನರನ್ನು ಕೊಂದಿದ್ದಾರೆ ಎಂಬುದರ ಆಧಾರದ ಮೇಲೆ ಅವರ ಮುಖದ ಮೇಲೆ ಟ್ಯಾಟೂ- ಹಚ್ಚೆ. ಆದರೆ ಇದೆಲ್ಲ ಬದಲಾಗಲು ಶುರುವಾದದ್ದು ಇತ್ತೀಚೆಗೆ. 2019ರಲ್ಲಿ 37 ವಯಸ್ಸಿನ ‘ನಿಯಾಬ್ ಬುಕೇಲಿ’ ಎಲ್ ಸೆಲ್ವಾಡೋರ್‌ನ ಅಲ್ಲಿನ ಅಧ್ಯಕ್ಷನಾದ.

ಅದಾದ ಮೇಲೆ ಕೋವಿಡ್ ಸಾಂಕ್ರಾಮಿಕ ಎಲ್ಲ ಕಳೆಯಿತು. 2022ರ ಮಾರ್ಚ್. ಒಂದೇ ದಿನ 62 ಜನರನ್ನು ಈ ಗ್ಯಾಂಗ್ ಕೊಂದಿತು. ಮುಂದಿನ ಮೂರು ದಿನದಲ್ಲಿ 87 ಜನರ ಕೊಲೆಯಾಯಿತು. ಅದೊಂದು ಘಟನೆ. ನಿಯಾಬ್ ಬುಕೇಲಿ ಸುಮ್ಮನೆ ಕೂರಲಿಲ್ಲ. ತನಗಿದ್ದ ಎಲ್ಲ ಸಂಕೋಲೆಗಳ ಡುವೆ ಈ ಗ್ಯಾಂಗುಗಳ ಮೇಲೆ ಸಮರ ಸಾರಿಬಿಟ್ಟ. ಅಲ್ಲಿನ ಪೊಲೀಸ್ ವ್ಯವಸ್ಥೆ ಗ್ಯಾಂಗ್‌ನ ಭಾಗವೇ ಆಗಿದ್ದ ರಿಂದ ಮಿಲಿಟರಿಗೆ ಈ ಕೆಲಸವನ್ನು ವಹಿಸಿದ.

ಯಾವುದೇ ದೇಶ ತನ್ನದೇ ನೆಲದಲ್ಲಿ ತನ್ನದೇ ಜನರ ಮೇಲೆ ಮಿಲಿಟರಿ ಬಳಸುವಾಗ ಲಕ್ಷ ಬಾರಿ ಯೋಚಿಸುತ್ತದೆ. ಅದು ಸಾಮಾನ್ಯವಲ್ಲ. ಆದರೆ ಅದೆಲ್ಲ ನಿಯಮಗಳನ್ನು ‘ನಿಯಾಬ್ ಬುಕೇಲಿ’ ಮೀರಲೇ ಬೇಕಿತ್ತು. ಏಕೆಂದರೆ ಆತ ಯುದ್ಧಕ್ಕೆ ನಿಂತದ್ದು ತನ್ನದೇ ನೆಲದಲ್ಲಿ ತುಂಬಿರುವ ಒಂದು ಲಕ್ಷ ದುರುಳರ ವಿರುದ್ಧ. ಈಗ ಆ ಗ್ಯಾಂಗ್‌ನ ಹೆಡೆಮುರಿದಾಗಿದೆ- ಮುಗಿದಿಲ್ಲ.

ಬರೋಬ್ಬರಿ 85 ಸಾವಿರದಷ್ಟು ಗ್ಯಾಂಗ್ ಸದಸ್ಯರನ್ನು ಬಂಧಿಸಲಾಗಿದೆ. ಆದರೆ ಅಷ್ಟೊಂದು ಮಂದಿ ಯನ್ನು ಇಡುವುದೆಲ್ಲಿ? ನಿಯಾಬ್ ಬುಕೇಲಿ ಅವರಿಗೆಂದೇ ವಿಶೇಷ ಜೈಲ್ ನಿರ್ಮಿಸಿದ. ವಿಶೇಷ ಜೈಲು ಅಂದದ್ದೇಕೆ ಎಂದರೆ ಇಉಇuS ಹೆಸರಿನ ಈ ಜೈಲಿಗೆ ಸದ್ಯ ಜಗತ್ತಿನ ಅತ್ಯಂತ ಅಭೇದ್ಯ ಜೈಲುಗಳ ಸಾಲಿನಲ್ಲಿ ಮೊದಲಸ್ಥಾನ. ಒಂದೊಂದು ಜಾಲಿನಲ್ಲಿ 40 ಸಾವಿರ ಖೈದಿಗಳು. ಹೋಲಿಕೆಗೆ ಹೇಳುವುದಾದರೆ ಕರ್ನಾಟಕದಲ್ಲಿ ಎಲ್ಲಾ ಜೈಲಿನಲ್ಲಿರುವ ಖೈದಿಗಳನ್ನು ಸೇರಿಸಿದರೆ 16-17 ಸಾವಿರ ವಾಗುತ್ತದೆ (ಭಾರತದಲ್ಲಿ ಅಜಮಾಸು 1400 ಜೈಲುಗಳಿವೆ ಮತ್ತು 7 ಲಕ್ಷ ಕೈದಿಗಳಿದ್ದಾರೆ). ಸೆಲ್ವಾ ಡೋರ್‌ನಲ್ಲಿ ಒಂದೊಂದು ಜೈಲಿನಲ್ಲಿ 40 ಸಾವಿರ ಖೈದಿಗಳು. ಅಂತಿಂಥಾ ಖೈದಿಗಳಲ್ಲ, ನೀಚರ ಪರಮನೀಚರು, ಉಗ್ರಗಾಮಿಗಳು.

ಇಷ್ಟೆ ಆಗುವಾಗ ಇತ್ತ ಅಮೆರಿಕದಲ್ಲಿಯೂ ಈ ಗ್ಯಾಂಗಿನವರಿದ್ದರಲ್ಲ, ಅವರ ಉಪಟಳ ಅಮೆರಿಕ ದಲ್ಲಿ ಮುಂದುವರಿಯಿತು. ಈಗ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನೆಲ್ಲ ಬಂಧಿಸಿ, ತಲೆ ಬೋಳಿಸಿ ಮಿಲಿಟರಿ ವಿಮಾನದಲ್ಲಿ ಎಲ್ ಸೆಲ್ವಾಡೋರ್‌ಗೆ ಕಳುಹಿಸಿಕೊಡುತ್ತಿದ್ದಾನೆ. ಅಷ್ಟೇ ಅಲ್ಲ, ಅವರನ್ನೆಲ್ಲ ಇರಿಸಲು ಅಮೆರಿಕ ಇನ್ನೊಂದೆರಡು ಈ ಪ್ರಮಾಣದ ಜೈಲು ನಿರ್ಮಿಸಲು ಎಲ್ ಸೆಲ್ವಾಡೋರ್‌ಗೆ ಸಹಾಯಮಾಡಲಿಕ್ಕಿದೆ.

ಹೇಳಬೇಕಿರುವುದಿಷ್ಟು. ಒಂದು ಸರಕಾರಿ ವ್ಯವಸ್ಥೆ ಸ್ವಲ್ಪವೇ ಎಡವಿದರೂ ಉಗ್ರಗಾಮಿ ಗುಂಪೊಂದು ಕೆಲವೇ ವರ್ಷದಲ್ಲಿ ಎಷ್ಟು ಬೆಳೆಯಬಹುದು ಎಂಬುದಕ್ಕೆ ಇದು ನಿದರ್ಶನ. ಜತೆಯಲ್ಲಿ ಸಮಾಜದ ಬಹುಭಾಗ ಉಗ್ರಗಾಮಿಗಳ ಜತೆ ಸೇರಿದಲ್ಲಿ ಏನಾಗಬಹುದು ಎಂಬುದಕ್ಕೂ ಇದು ಒಳ್ಳೆಯ ಹೋಲಿಕೆ. ಜತೆಯಲ್ಲಿ ಸರಕಾರ ದುರ್ಬಲವಿದ್ದರೂ ಎಷ್ಟು ಗಟ್ಟಿ ನಿಲುವು ತಾಳಬಹುದು ಎಂಬು ದಕ್ಕೂ ಎಲ್ ಸೆಲ್ವಾಡೋರ್ ಮಾದರಿ. ಆ ದೇಶ ಇಂದಿಗೂ ಬಡದೇಶವೇ. ಆದರೂ ತಾನು ಬದಲಾಗ ಬೇಕು ಎಂದು ಮೈಕೊಡವಿ ನಿಂತಿತಲ್ಲ, ಅಲ್ಲಿನ ಅಧ್ಯಕ್ಷ ದಿಟ್ಟ ಹೆಜ್ಜೆ ತೆಗೆದುಕೊಂಡನಲ್ಲ, ಅದೆಲ್ಲ ದಕ್ಕಿಂತ ಹೆಚ್ಚಾಗಿ ಅವನ ಜತೆ ದೇಶವೇ ನಿಂತಿತಲ್ಲ. ಸರಕಾರ-ಸಭ್ಯ ಜನಸಾಮಾನ್ಯರು ನಿರ್ಧರಿಸಿ ದಲ್ಲಿ ಏನನ್ನೂ ಬದಲಿಸಬಹುದು. ಕಾಶ್ಮೀರವನ್ನು ಕೂಡ.



Source link

ADMIN

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಕರ್ನಾಟಕ

ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನವನ್ನು ನಿಮ್ಮ ಮಾರ್ಗದರ್ಶಕ ಆಗಿ ಸ್ವೀಕರಿಸಿ

  • September 16, 2024
ಧಾರವಾಡ ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಮುಖ ಮತ್ತು ಇಂಜಿನಿಯರಗಳು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಾಗಿದೆ ಎಂದು , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
Translate »