ಚಿಕ್ಕಬಳ್ಳಾಪುರ : ಮೇ ೫ರ ಸೋಮವಾರದಿಂದ ಜಾತಿ ಜನಗಣತಿ ಆರಂಭವಾಗಲಿದ್ದು, ಮಾದಿಗ ಸಮುದಾಯದ ಪ್ರತಿಯೊಬ್ಬರೂ ಅರ್ಜಿಯಲ್ಲಿ ಜಾತಿ ಬರೆಸುವಾಗ ಕಾಲಂ 61ರಲ್ಲಿ ಮಾದಿಗ ಎಂದು ಕಡ್ಡಾಯವಾಗಿ ಬರೆಸಬೇಕು ಎಂದು ನೆಲಮಂಗಲದ ಪಾಲನಹಳ್ಳಿ ಮಠದ ಶ್ರೀ ಸಿದ್ದರಾಜು ಸ್ವಾಮೀಜಿ ಹೇಳಿದರು. ಚಿಕ್ಕಬಳ್ಳಾಪುರ ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಪರಿಶಿಷ್ಟರಲ್ಲಿ ಮಾದಿಗ ಸಮಾಜ ಬಹುಸಂಖ್ಯಾತವಾದುದು. ನಾವು ಜಂಬುದ್ವೀಪದ ಮೂಲನಿವಾಸಿ ಗಳು. ಮೀಸಲಾತಿ ವರ್ಗೀಕರಣಕ್ಕಾಗಿ ೩೦ ವರ್ಷಗಳಿಂದ ಹೋರಾಟ ನಡೆಸಿದ್ದೇವೆ. ಬಹುಸಂಖ್ಯಾತ ಮಾದಿಗ ಸಮುದಾಯಕ್ಕೆ ಕಾನೂನುಬದ್ಧವಾಗಿ ಸಲ್ಲಬೇಕಾದ ಸೌಲಭ್ಯಗಳು ದೊರೆಯುತ್ತಿಲ್ಲ ಎಂದರು.
ಒಳಮೀಸಲಾತಿ ವರ್ಗೀಕರಣಕ್ಕೆ ತಾರ್ಕಿಕ ಅಂತ್ಯ ಕಾಣಿಸಲು ನ್ಯಾ.ನಾಗಮೋಹನದಾಸ್ ಆಯೋಗದ ಶಿಫಾರಸಿನಂತೆ ಪರಿಶಿಷ್ಟಜಾತಿ/ವರ್ಗದ ಜನಗಣತಿ ಸೋಮವಾರ (ಮೇ.೫)ದಿಂದ ಆರಂಭವಾಗಲಿದೆ.ಈವೇಳೆ ಸಮುದಾಯದ ಸುಶಿಕ್ಷಿತರು ಮುಂದೆ ನಿಂತು ತಮ್ಮ ಸಮುದಾಯದ ಹೆಸರನ್ನು ತಪ್ಪಿಲ್ಲದೆ ನಮೂದಿಸಬೇಕು ಎಂದು ಕಿವಿಮಾತು ಹೇಳಿದರು.
ನಮ್ಮ ಹೋರಾಟಕ್ಕೆ ಬಲ ಸಿಗಬೇಕಾದಲ್ಲಿ ನಾವೆಲ್ಲರೂ ಮಾದಿಗ ಎಂದೇ ನಮೂದಿಸಬೇಕು. ಆದಿ ದ್ರಾವಿಡ, ಆದಿ ಕರ್ನಾಟಕ, ಆದಿ ಆಂಧ್ರ, ಜಾಂಬವರು, ಎ.ಕೆ, ಎ.ಡಿ ಇತರೆ ಯಾವುದೇ ಉಪಜಾತಿ ಹೆಸರುಗಳನ್ನು ಬರೆಸಬಾರದು. ಈ ಮೂಲಕ ನಮಗೆ ಸಿಗಬೇಕಾದ ಎಲ್ಲಾ ಸವಲತ್ತುಗಳನ್ನು ಪಡೆದುಕೊಳ್ಳೋಣ ಎಂದು ಕರೆ ನೀಡಿದರು.
ಇದರಿಂದ ಸಾಮಾಜಿಕ, ರಾಜಕೀಯವಾಗಿ ಶಕ್ತಿ ದೊರೆಯುತ್ತದೆ. ದತ್ತಾಂಶಗಳು ಬಲಾಢ್ಯವಾಗಿದ್ದಾಗ ಸಮುದಾಯಕ್ಕೆ ಅನುಕೂಲ. ಈ ಬಗ್ಗೆ ಸಮುದಾಯದ ಶಿಕ್ಷಿತರು, ಹೋರಾಟಗಾರರು ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಬೇಕು ಎಂದು ಕೋರಿದರು.
ಮೊದಲು ಎಸ್ಸಿ ಮಾದಿಗ ಎಂದಿತ್ತು. ನಮ್ಮ ಸಮದಾಯ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಸರಿಯಾದ ಪ್ರಾಮುಖ್ಯತೆ ದೊರೆತಿಲ್ಲ. ಆದ್ದರಿಂದ, ಮುಂದಿನ ದಿನಗಳಲ್ಲಿ ರಾಜಕೀಯ, ಸಾಮಾಜಿಕ ವಾಗಿ ಸಮುದಾಯ ಶಕ್ತರಾಗಲು ಈ ಸಮೀಕ್ಷೆ ಅತೀ ಮುಖ್ಯ. ಎಲ್ಲರೂ ಇದರಲ್ಲಿ ಪಾಲ್ಗೊಂಡು ಮಾದಿಗ ಎಂದು ಬರೆಸಿ ಎಂದು ಹೇಳಿದರು.
ಆನಂದ ಗುರೂಜಿ ಮಾತನಾಡಿ, ಉಪ ಗುಂಪುಗಳನ್ನು ನಮೂದಿಸಬಾರದು. ಸರಿಯಾದ ರೀತಿಯಲ್ಲಿ ಗಣತಿಯ ಕಾಲಂಗಳನ್ನು ಭರ್ತಿ ಮಾಡಬೇಕು. ಎಲ್ಲರೂ ಒಗ್ಗಟ್ಟಿನಿಂದ ಮಾದಿಗ ಎಂದು ಬರೆಸಬೇಕು ಎಂದರು.
ಮಾಜಿ ಶಾಸಕಿ ಅನಸೂಯಮ್ಮ ನಟರಾಜನ್ ಮಾತನಾಡಿ ಮಾದಿಗ ಸಮುದಾಯದ ಜನಸಂಖ್ಯೆ ಹೆಚ್ಚಿದ್ದರೂ ತಕ್ಕಂತೆ ಔದ್ಯೋಗಿಕ,ಶೈಕ್ಷಣಿಕ,ರಾಜಕೀಯ ಪ್ರಾಮುಖ್ಯ ದೊರೆಯುತ್ತಿಲ್ಲ. ನಮ್ಮ ಊಟ ನಮಗೆ ಕೊಡಿ ಎಂದಷ್ಟೇ ಕೇಳುತ್ತಿದ್ದೇವೆ ಎಂದರು.
ಪಟ್ರೇನಹಳ್ಳಿ ಕೃಷ್ಣ ಮಾತನಾಡಿ, ಮೇ ೫ರಿಂದ ೧೭ರವರೆಗೆ ಸಮೀಕ್ಷೆ ನಡೆಸಲು ಸರಕಾರ ಮುಂದಾ ಗಿದೆ. ಜಾತಿಯಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ ಎಂಬ ಸಾಕಷ್ಟು ಗೊಂದಲಗಳಿವೆ.ಇದನ್ನು ತಪ್ಪಿಸಬೇಕಾದರೆ ನಮ್ಮ ಸಮುದಾಯದ ಹೋರಾಟಗಾರರು, ಹಿರಿಯರು, ಉದ್ಯೋಗಸ್ಥರು,ಮುಂದೆ ನಿಂತು ಈವೇಳೆ ಜಾತಿ ಕಾಲಂನಲ್ಲಿ ಮಾದಿಗ ಸಮುದಾಯ ಎಂದು ನಮೂದಿಸಬೇಕು. ಈ ಮೂಲಕ ಮಾದಿಗ ಸಮುದಾಯದ ಅಭಿವೃದ್ಧಿಗೆ ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಮುದಾಯದ ಮುಖಂಡರಾದ ನಾರಾಯಣಸ್ವಾಮಿ, ವಿಜಯಕೃಷ್ಣ, ನಾರಾಯಣಮ್ಮ,ನಾಗಪ್ಪ, ಮತ್ತಿತರರು ಪಾಲ್ಗೊಂಡಿದ್ದರು.