Karunadu Studio

ಕರ್ನಾಟಕ

MI vs GT: ಲೋಸ್ಕೋರಿಂಗ್‌ ಪಂದ್ಯದಲ್ಲಿ ಮುಂಬೈ ಸದ್ದಡಗಿಸಿದ ಗುಜರಾತ್‌ ಟೈಟನ್ಸ್‌! – Kannada News | Gujarat Titans beat Mumbai Indians by 3 Wickets (DLS Rules) in 56th Match of IPL 2025


ಮುಂಬೈ: ಎರಡು ಬಾರಿ ಮಳೆಯ ಆಡಚಣೆಯ ಹೊರತಾಗಿಯೂ ಕೊನೆಯವರೆಗೂ ತೀವ್ರ ರೋಚಕತೆಯಿಂದ ಕೂಡಿದ್ದ ಕಡಿಮೆ ಮೊತ್ತದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ (Mumbai Indians) ವಿರುದ್ದ ಗುಜರಾತ್‌ ಟೈಟನ್ಸ್‌ (Gujarat Titans) ತಂಡ 3 ವಿಕೆಟ್‌ (DLS ನಿಯಮ) ಗೆಲುವು ಸಾಧಿಸಿತು. ಆ ಮೂಲಕ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿತು. ಇನ್ನು ಮಳೆಯಿಂದ ಈ ಪಂದ್ಯವನ್ನು ಗೆಲ್ಲುವ ಫೆವರಿಟ್‌ ಆಗಿದ್ದ ಹಾರ್ದಿಕ್‌ ಪಾಂಡ್ಯ ನಾಯಕತ್ವದ ಮುಂಬೈ ಕೊನೆಗೂ ಸೋಲು ಒಪ್ಪಿಕೊಂಡಿತು. ಸತತ ಆರು ಪಂದ್ಯಗಳ ಬಳಿಕ ಐದು ಬಾರಿ ಚಾಂಪಿಯನ್ಸ್‌ ತವರು ಅಭಿಮಾನಿಗಳ ಎದುರು ಸೋಲಿನ ರುಚಿ ಕಂಡಿತು.

ಮಂಗಳವಾರ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್‌ ನೀಡಿದ್ದ 156 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಗುಜರಾತ್‌ ಟೈಟನ್ಸ್‌ ತಂಡ, ಸುಲಭವಾಗಿ ಗೆಲುವು ಪಡೆಯಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆರಂಭಿಕ ಸಾಯಿ ಸುದರ್ಶನ್‌ ಬೇಗ ವಿಕೆಟ್‌ ಒಪ್ಪಿಸಿದರೂ, ಶುಭಮನ್‌ ಗಿಲ್‌ (43) ಹಾಗೂ ಜೋಸ್‌ ಬಟ್ಲರ್‌ (30) ಅವರು ಉತ್ತಮ ಜೊತೆಯಾಟದ ಮೂಲಕ ಗುಜರಾತ್‌ ಟೈಟನ್ಸ್‌ ಗೆಲುವಿನ ಹಾದಿಯಲ್ಲಿತ್ತು.

IPL 2025: ವಿರಾಟ್‌ ಕೊಹ್ಲಿಯ ಸ್ಟ್ರೈಕ್‌ ರೇಟ್‌ ಕಡಿಮೆ ಎಂದವರಿಗೆ ಎಬಿಡಿ ತಿರುಗೇಟು!

ಆದರೆ, ವೇಗಿ ಅಶ್ವಿನಿ ಕುಮಾರ್‌ 12ನೇ ಓವರ್‌ನಲ್ಲಿ ಜೋಸ್‌ ಬಟ್ಲರ್‌ ಅವರನ್ನು ಔಟ್‌ ಮಾಡಿ, ಮುಂಬೈ ಕಮ್‌ಬ್ಯಾಕ್‌ಗೆ ನೆರವು ನೀಡಿದ್ದರು. 46 ಎಸೆತಗಳಲ್ಲಿ 43 ರನ್‌ ಗಳಿಸಿ ಆಡುತ್ತಿದ್ದ ನಾಯಕ ಶುಭಮನ್‌ ಗಿಲ್‌ ಅವರನ್ನು ಜಸ್‌ಪ್ರೀತ್‌ ಬುಮ್ರಾ ಕ್ಲೀನ್‌ ಬೌಲ್ಡ್‌ ಮಾಡಿದರು. 15 ಎಸತೆಗಳಲ್ಲಿ 28 ರನ್‌ ಗಳಿಸಿ ಆಡುತ್ತಿದ್ದ ಶೆರ್ಫೆನ್‌ ಋದರ್‌ಫೋರ್ಡ್‌ ಅವರನ್ನು ಟ್ರೆಂಟ್‌ ಬೌಲ್ಟ್‌ ಕ್ಲೀನ್‌ ಬೌಲ್ಡ್‌ ಮಾಡಿದರು. ನಂತರ ಶಾರೂಖ್‌ ಖಾನ್‌ ಮತ್ತು ರಶೀದ್‌ ಖಾನ್‌ ಔಟ್‌ ಆದರು.

ಗುಜರಾತ್‌ಗೆ ರೋಚ ಜಯ

ಗುಜರಾತ್‌ ಟೈಟನ್ಸ್‌ ತಂಡ 18 ಓವರ್‌ಗಳಿಗೆ 6 ವಿಕೆಟ್‌ ನಷ್ಟಕ್ಕೆ 132 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಜಿಟಿಗೆ ಕೊನೆಯ 12 ಎಸೆತಗಳಲ್ಲಿ 24 ರನ್‌ ಅಗತ್ಯವಿತ್ತು. ಈ ವೇಳೆ ಎರಡನೇ ಬಾರಿ ಮಳೆ ಬಂದ ಕಾರಣ ಪಂದ್ಯವನ್ನು ನಿಲ್ಲಿಸಲಾಯಿತು. ಮಳೆ ನಿಂತ ಬಳಿಕ ಪಂದ್ಯವನ್ನು 19 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು. ಆ ಮೂಲಕ ಕೊನೆಯ ಓವರ್‌ನಲ್ಲಿ ಗುಜರಾತ್‌ಗೆ 15 ರನ್‌ ಅಗತ್ಯವಿತ್ತು. ಕೊನೆಯ ಓವರ್‌ನಲ್ಲಿ ದೀಪಕ್‌ ಚಹರ್‌ಗೆ ರಾಹುಲ್‌ ತೆವಾಟಿಯಾ ಬೌಂಡರಿ ಸೇರಿ 5 ರನ್‌ ಗಳಿಸಿದರೆ, ಜೆರಾಲ್ಡ್‌ ಕೋಯೆಡ್ಜಿ ಸಿಕ್ಸರ್‌ ಬಾರಿಸಿದ್ದರು. ನಂತರ ಕೊನೆಯ ಎರಡು ಎಸೆತಗಳಲ್ಲಿ ಒಂದು ರನ್‌ ಬೇಕಿದ್ದಾಗ ಕೊಯೆಡ್ಜಿ ವಿಕೆಟ್‌ ಒಪ್ಪಿಸಿದರು. ನಂತರ ಕ್ರೀಸ್‌ಗೆ ಬಂದಿದ್ದ ಅರ್ಷದ್‌ ಒಂದು ರನ್‌ ಗಳಿಸಿ ಗುಜರಾತ್‌ ಟೈಟನ್ಸ್‌ ಅನ್ನು ಗೆಲುವಿನ ದಡ ಸೇರಿಸಿದರು. ಅಂತಿಮವಾಗಿ ಜಿಟಿ, 19 ಓವರ್‌ಗಳಿಗೆ 7 ವಿಕೆಟ್‌ ಕಳೆದುಕೊಂಡು 147 ರನ್‌ಗಳನ್ನು ಗಳಿಸಿ ಗೆದ್ದು ಬೀಗಿತು.

155 ರನ್‌ಗಳನ್ನು ಕಲೆ ಹಾಕಿದ್ದ ಮುಂಬೈ ಇಂಡಿಯನ್ಸ್‌

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಮುಂಬೈ ಇಂಡಿಯನ್ಸ್‌ ತಂಡ, ಗುಜರಾತ್‌ ಟೈಟನ್ಸ್‌ ಬೌಲರ್‌ಗಳ ಶಿಸ್ತುಬದ್ದ ಬೌಲಿಂಗ್‌ ದಾಳಿಯ ಹೊರತಾಗಿಯೂ ವಿಲ್‌ ಜ್ಯಾಕ್ಸ್‌ ಹಾಗೂ ಸೂರ್ಯಕುಮಾರ್‌ ಯಾದವ್‌ ಅವರ ಉಪಯುಕ್ತ ಬ್ಯಾಟಿಂಗ್‌ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 8 ವಿಕೆಟ್‌ಗಳ ನಷ್ಟಕ್ಕೆ 155 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಗುಜರಾತ್‌ ಟೈಟನ್ಸ್‌ಗೆ 156 ರನ್‌ಗಳ ಸ್ಪರ್ಧಾತ್ಮಕ ಗುರಿಯನ್ನು ನೀಡಿತ್ತು.

ಮುಂಬೈ ಪರ ಇನಿಂಗ್ಸ್‌ ಆರಂಭಿಸಿದ ರೋಹಿತ್‌ ಶರ್ಮಾ ಹಾಗೂ ರಯಾನ್‌ ರಿಕೆಲ್ಟನ್‌ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದರು. ಈ ಇಬ್ಬರೂ ಪವರ್‌ಪ್ಲೇ ಒಳಗೆ ವಿಕೆಟ್‌ ಒಪ್ಪಿಸಿದರು. ಆ ಮೂಲಕ ಮುಂಬೈ 26 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು. ನಂತರ ಮೂರನೇ ವಿಕೆಟ್‌ಗೆ ಜೊತೆಯಾದ ವಿಲ್‌ ಜ್ಯಾಕ್ಸ್‌ ಹಾಗೂ ಸೂರ್ಯಕುಮಾರ್‌ 71 ರನ್‌ಗಳ ಉಪಯುಕ್ತ ಜೊತೆಯಾಟವನ್ನು ಆಡಿದರು. ಆ ಮೂಲಕ ತಂಡವನ್ನು ಅಪಾಯದಿಂದ ಪಾರು ಮಾಡಿದ್ದರು.

MI vs GT: 500 ರನ್‌ ಸಿಡಿಸಿ ವಿಶೇಷ ದಾಖಲೆ ಬರೆದ ಸೂರ್ಯಕುಮಾರ್‌ ಯಾದವ್‌!

ವಿಲ್‌ ಜ್ಯಾಕ್ಸ್‌ ಅರ್ಧಶತಕ

ಅದ್ಭತ ಬ್ಯಾಟಿಂಗ್‌ ಪ್ರದರ್ಶನ ತೋರಿದ ವಿಲ್‌ ಜ್ಯಾಕ್ಸ್‌, 35 ಎಸೆತಗಳಲ್ಲಿ 53 ರನ್‌ಗಳನ್ನು ಸಿಡಿಸಿದರು. ಇನ್ನು ಇವರ ಜೊತೆ ಮತ್ತೊಂದು ತುದಿಯಲ್ಲಿ ಆಡಿದ್ದ ಸೂರ್ಯಕುಮಾರ್‌ ಯಾದವ್‌ 24 ಎಸೆತಗಳಲ್ಲಿ 35 ರನ್‌ಗಳನ್ನು ಗಳಿಸಿದ್ದರು. ಈ ಇಬ್ಬರೂ ವಿಕೆಟ್‌ ಒಪ್ಪಿಸಿದ ಬಳಿಕ ತಿಲಕ್‌ ವರ್ಮಾ, ಹಾರ್ದಿಕ್‌ ಪಾಂಡ್ಯ ಹಾಗೂ ನಮನ್‌ ಧೀರ್‌ ವಿಕೆಟ್‌ ಒಪ್ಪಿಸಿದರು. ಕೊನೆಯಲ್ಲಿ ಕಾರ್ಬಿನ್‌ ಬಾಷ್‌ 22 ಎಸೆತಗಳಲ್ಲಿ 27 ರನ್‌ಗಳ ಉಪಯುಕ್ತ ಕೊಡುಗೆಯನ್ನು ನೀಡಿದರು.

ಗುಜರಾತ್‌ ಟೈಟನ್ಸ್‌ ಪರ ಸಾಯಿ ಸುದರ್ಶನ್‌ ಎರಡು ವಿಕೆಟ್‌ ಪಡೆದರೆ, ಬೌಲ್‌ ಮಾಡಿದ ಇನ್ನುಳಿದ ಎಲ್ಲಾ ಬೌಲರ್‌ಗಳು ತಲಾ ಒಂದೊಂದು ವಿಕೆಟ್‌ ಕಿತ್ತರು.



Source link

ADMIN

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಕರ್ನಾಟಕ

ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನವನ್ನು ನಿಮ್ಮ ಮಾರ್ಗದರ್ಶಕ ಆಗಿ ಸ್ವೀಕರಿಸಿ

  • September 16, 2024
ಧಾರವಾಡ ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಮುಖ ಮತ್ತು ಇಂಜಿನಿಯರಗಳು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಾಗಿದೆ ಎಂದು , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
Translate »