Karunadu Studio

ಕರ್ನಾಟಕ

Roopa Gururaj Column: ಶಂಕರ ಕಥಾಮೃತದ ಮನಮುಟ್ಟುವ ಘಟನೆ – Kannada News | Heartwarming incident of Shankara Kathamrita


ಒಂದೊಳ್ಳೆ ಮಾತು

ಆದಿ ಶಂಕರಾಚಾರ್ಯರು ಭಾರತದ ಉದ್ದಗಲಕ್ಕೂ ಸಂಚರಿಸುತ್ತಾ ಪಶ್ಚಿಮ ಘಟ್ಟಗಳ ಅಂಚಿನಲ್ಲೇ ಹೊರಟು ಕೊಡಚಾದ್ರಿ ಪರ್ವತದ ತಪ್ಪಲಿನಲ್ಲಿರುವ ಕೊಲ್ಲೂರು ಕ್ಷೇತ್ರಕ್ಕೆ ಬಂದರು. ಮೂಕಾ ಸುರನೆಂಬ ರಾಕ್ಷಸನನ್ನು ಕೊಂದು ಮೂಕಾಂಬಿಕಾ ಎಂಬ ಹೆಸರಿನಿಂದ ಪ್ರಖ್ಯಾತಳಾದ ಆದಿಶಕ್ತಿ‌ ಯು ನೆಲೆಸಿರುವ ಕ್ಷೇತ್ರವೇ ಕೊಲ್ಲೂರು. ಆಚಾರ್ಯರು ಮೂಕಾಂಬಿಕಾ ದೇವಿಯನ್ನು ಆರಾಧಿಸಿ ಅಲ್ಲಿ ಶ್ರೀ ಚಕ್ರವನ್ನು ಸ್ಥಾಪಿಸಿ, ಈ ಕ್ಷೇತ್ರದ ಮಹಿಮೆಯನ್ನು ಮತ್ತಷ್ಟು ಹೆಚ್ಚಿಸಿದರು. ಅನೇಕ ಸ್ತೋತ್ರಗಳನ್ನು ರಚಿಸಿ ದೇವಿಯನ್ನು ಸ್ತುತಿಸಿದರು. ದೇವಿಯನ್ನು ಕಂಡು ಕೃತರ್ಥರಾದ ಆಚಾರ್ಯ ರು ಆನಂತರ ದೇವಾಲಯದಿಂದ ಹೊರಗೆ ಹೊರಟರು. ದ್ವಾರಕ್ಕೆ ಸ್ವಲ್ಪ ದೂರದಲ್ಲಿ ಒಬ್ಬ ಬ್ರಾಹ್ಮಣ ದಂಪತಿಗಳು ತಮ್ಮ ಮಗುವನ್ನು ಮುಂದಿಟ್ಟು ಕೊಂಡು ಗಟ್ಟಿಯಾದ ಸ್ವರದಲ್ಲಿ ರೋಧಿಸುತ್ತಿದ್ದರು. ಆ ಮಗು ಸತ್ತು ಹೋಗಿತ್ತು.

ದೇವಾಲಯದಿಂದ ಹೊರಬಂದ ಆಚಾರ್ಯರನ್ನ ಆ ದಂಪತಿಗಳು ನೋಡಿದರು. ತೇಜಸ್ಸಿನಿಂದ ಕೂಡಿದ ಅವರ ಮುಖವನ್ನು ಕಂಡೊಡನೆ ಆ ದಂಪತಿಗಳು “ಈತನಾರೋ ಮಹಾತ್ಮನೇ ಇರಬೇಕು” ಎಂದು ಆಲೋಚಿಸಿ ಅವರ ಬಳಿಗೆ ಬಂದರು. ಸತ್ತು ಹೋಗಿದ್ದ ತಮ್ಮ ಮಗುವನ್ನು ಆಚಾರ್ಯರ ಪಾದಗಳ ಬಳಿ ಇಟ್ಟು “ಮಹಾತ್ಮರೆ ನಿಮ್ಮನ್ನು ನೋಡಿದರೆ ದೈವಾಂಶ ಪುರುಷರನ್ನು ಕಂಡಂತೆ ಭಾಸವಾಗುತ್ತದೆ.

ಇದನ್ನೂ ಓದಿ: Roopa Gururaj Column: ಶ್ರೀರಂಗನಿಗೆ ನೈವೇದ್ಯವಾದ ಬೆಲ್ಲದ ತುಂಡು

ನೀವಾದರೂ ಈ ಮಗುವನ್ನು ಬದುಕಿಸಿಕೊಡಿ. ಇದುವರೆಗೆ ನಾವು 13 ಮಕ್ಕಳನ್ನು ಕಳೆದುಕೊಂಡು ದುಃಖದಲ್ಲಿ ಬೆಂದು ಹೋಗಿದ್ದೇವೆ” ಎಂದು ಅಂಗಲಾಚಿದರು. ಆ ದಂಪತಿಗಳ ದುಃಖದಲ್ಲಿ ಆಚಾರ್ಯರು ಒಂದು ಕ್ಷಣ ಭಾಗಿಯಾದರು. ಬಳಿಕ ಅವರನ್ನು ಈ ರೀತಿ ಪ್ರಶ್ನಿಸಿದರು.

“ಸಾವು ಎಂದರೇನು ಮಗು ಇಲ್ಲೇ ಇದೆಯಲ್ಲ!” “ಇದು ಮಗುವಿನ ಕಳೇಬರ. ಅದರ ಪ್ರಾಣ ಹೋಗಿ ಎಷ್ಟೋ ಹೊತ್ತಾಗಿದೆ” ಎಂದು ಆ ದಂಪತಿಗಳು ಹೇಳಿದರು. ಆಚಾರ್ಯರು ಪುನಃ ಕೇಳಿದರು “ಹಾಗಾದರೆ ನೀವು ಇದುವರೆಗೆ ವಿಶ್ವಾಸದಿಂದ ಕಂಡು ಮುದ್ದಿಸುತ್ತಿದ್ದುದು ಇಲ್ಲಿರುವ ಈ ದೇಹ ವನ್ನೋ, ಹೊರಟು ಹೋದ ಆ ಪ್ರಾಣವನ್ನೋ?” ಆಚಾರ್ಯರ ಪ್ರಶ್ನೆಗೆ ಏನು ಉತ್ತರ ಕೊಡ ಬೇಕೆಂದು ಆ ದಂಪತಿಗಳಿಗೆ ತೋಚಲಿಲ್ಲ.

ಆಚಾರ್ಯರು ಪುನಃ ಕೇಳಿದರು. “ದೇಹವನ್ನೇ ನೀವು ಮುದ್ದಿಸಿ ಪ್ರೀತಿಸುತ್ತಿದ್ದುದ್ದಾದರೆ ಈಗಲೂ ಮುದ್ದಿಸಬಹುದು. ಪ್ರಾಣವನ್ನು ನೀವು ಮುದ್ದಿಸುತ್ತಿದ್ದುದೇ ಆದರೆ ಅದು ಆಗಲು ಕಣ್ಣಿಗೆ ಕಾಣಿಸುತ್ತಿರಲಿಲ್ಲ. ಈಗಲೂ ಕಾಣಿಸುತ್ತಿಲ್ಲ. ಇದಕ್ಕೇಕೆ ನೀವು ದುಃಖಿಸಬೇಕು?” ಆಚಾರ್ಯರ ತತ್ವೋಪದೇಶ ಆ ತಂದೆ ತಾಯಿಗಳ ಮನಸ್ಸನ್ನು ಮುಟ್ಟಲಿಲ್ಲ. ಕ್ಷಣ ಕ್ಷಣಕ್ಕೂ ಪುತ್ರಶೋಕ ಹೆಚ್ಚಿ ಅವರನ್ನು ದಹಿಸುತ್ತಿತ್ತು. ಆಗ ಆಚಾರ್ಯರು ಆ ಕ್ಷೇತ್ರ ದೇವತೆಯಾದ ಮೂಕಾಂಬಿಕೆಯನ್ನೇ ಸ್ತುತಿಸಿ ಆ ಮಗುವನ್ನು ಬದುಕಿಸಿದರು. ಮಗು ಕಣ್ಣು ಬಿಟ್ಟು ಕೈಕಾಲುಗಳನ್ನು ಆಡಿಸಿತು. ಅದು ಕಣ್ಣು ಬಿಡುವ ಹೊತ್ತಿಗೆ ಆಚಾರ್ಯರ ತತ್ವೋಪದೇಶ ಆ ತಂದೆ ತಾಯಿಗಳ ಒಳಗಣ್ಣನ್ನು ತೆರೆಯುವಂತೆ ಮಾಡಿತ್ತು. ಈ ಸಂಸಾರವೇ ನಶ್ವರವೆಂಬ ಭಾವನೆ ಅವರಲ್ಲಿ ಮೂಡಿ ಅವರ ಮನಸ್ಸು ವೈರಾಗದತ್ತ ಸಾಗತೊಡಗಿತ್ತು.

ಆ ದಂಪತಿಗಳು ಅಡಿಗಡಿಗೆ ಆಚಾರ್ಯರಿಗೆ ವಂದಿಸುತ್ತಾ- “ಮಹಾತ್ಮರೇ, ನಿಮ್ಮ ಉಪದೇಶ ಕೇಳಿ ನಮ್ಮ ಮನಸ್ಸು ಪರಿವರ್ತನೆ ಆಗಿದೆ. ಈ ಸಂಸಾರದ ಸುಖವು ಸಾಕು. ನಮ್ಮನ್ನು ತಮ್ಮ ಶಿಷ್ಯರನ್ನಾಗಿ ಪರಿಗಣಿಸಬೇಕು” ಎಂದು ಪ್ರಾರ್ಥಿಸಿ ಕೊಂಡರು. ಆದರೆ ಆಚಾರ್ಯರು ಒಪ್ಪಲಿಲ್ಲ. “ಗೃಹಸ್ಥ ರಾಗಿರುವ ನೀವು ಗೃಹಸ್ಥಾಶ್ರಮದ ಧರ್ಮಕ್ಕನುಸಾರವಾಗಿ ನಡೆಯಬೇಕು. ಸಂಸಾರದಲ್ಲಿ ಒದಗುವ ಕಷ್ಟ ಸುಖಗಳಿಗೆ ಎದೆಗುಂದದೆ ಧೈರ್ಯವಾಗಿ ಅವುಗಳನ್ನು ಎದುರಿಸಿ, ಗೃಹಸ್ಥಾಶ್ರಮದ ಧರ್ಮ ಗಳನ್ನು ಅನುಸರಿಸಿ ನಡೆಯುವುದರಿಂದಲೇ ನಿಮಗೆ ಸದ್ಗತಿಯುಂಟಾಗುವುದು” ಎಂದು ಆದಂಪತಿ ಗಳಿಗೆ ಬುದ್ಧಿವಾದ ಹೇಳಿ ಆಶೀರ್ವದಿಸಿದರು. ಆನಂತರ ಆಚಾರ್ಯರ ಪ್ರಯಾಣ ಮುಂದುವರೆಯಿ ತು.

ಭಾರತದ ಪುರಾತನ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಶಂಕರಾಚಾರ್ಯರು ಹೇಳಿದ ಒಂದೊಂದು ಮಾತುಗಳೂ ಸೂರ್ಯ ಚಂದ್ರರಿರುವವರೆಗೆ ಪ್ರಸ್ತುತ. ಗೃಹಸ್ಥಾಶ್ರಮದಲ್ಲಿರುವವರಿಗೆ ನಾವು ಅದರ ಧರ್ಮಕ್ಕನುಸಾರವಾಗಿ ನಡೆಯಬೇಕು. ತಂದೆ ತಾಯಿ ಗಳನ್ನು, ಒಡಹುಟ್ಟಿದವರನ್ನು, ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಎಲ್ಲವನ್ನು ಸಂಭಾಳಿಸಿ ಕೊಂಡುಹೋಗುವ ಜಾಣ್ಮೆ ನಮಗಿರಬೇಕು. ಇದನ್ನು ಸಮರ್ಪಕವಾಗಿ ಮಾಡಿದಾಗಲೇ ನಮ್ಮ ಬದುಕಿಗೆ ಸಾರ್ಥಕತೆ.



Source link

ADMIN

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಕರ್ನಾಟಕ

ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನವನ್ನು ನಿಮ್ಮ ಮಾರ್ಗದರ್ಶಕ ಆಗಿ ಸ್ವೀಕರಿಸಿ

  • September 16, 2024
ಧಾರವಾಡ ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಮುಖ ಮತ್ತು ಇಂಜಿನಿಯರಗಳು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಾಗಿದೆ ಎಂದು , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
Translate »