ಶ್ರೀನಗರ: ಆಪರೇಷನ್ ಸಿಂಧೂರ್ ನಂತರ, ಪಾಕಿಸ್ತಾನ ಸೇನೆಯು ಬುಧವಾರ ಜಮ್ಮು ಮತ್ತು ಕಾಶ್ಮೀರದ ಗಡಿ ಪ್ರದೇಶಗಳಲ್ಲಿನ ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ತನ್ನ ಸರಣಿ ಕದನ ವಿರಾಮ ಉಲ್ಲಂಘನೆಯನ್ನು ಮುಂದುವರೆಸಿದೆ. ನಿನ್ನೆ ರಾತ್ರಿಯಿಂದ ಪಾಕಿಸ್ತಾನ ಸೇನೆ ನಡೆಸಿದ ಫಿರಂಗಿ ಗುಂಡಿನ ದಾಳಿಯಲ್ಲಿ(Pak artillery firing) ಹದಿನೈದು ಅಮಾಯಕ ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು 43 ಮಂದಿ ಗಾಯಗೊಂಡಿದ್ದಾರೆ ಎಂದು ರಕ್ಷಣಾ ಮೂಲಗಳು ಬುಧವಾರ ತಿಳಿಸಿವೆ. ಪಾಕಿಸ್ತಾನ ಸೇನೆಯು ಪೂಂಛ್ ಮತ್ತು ತಂಗ್ದಾರ್ ಗಡಿ ಪ್ರದೇಶಗಳಲ್ಲಿನ ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿದೆ.
ಈ ಗುಂಡಿನ ದಾಳಿಯು ಗ್ರಾಮಸ್ಥರಲ್ಲಿ ಭೀತಿಯನ್ನು ಉಂಟುಮಾಡಿದೆ ಮತ್ತು ಹಲವಾರು ಮನೆಗಳಿಗೆ ಹಾನಿ ಮಾಡಿದೆ. ಪಾಕಿಸ್ತಾನದ ಶೆಲ್ ದಾಳಿಯು ನಾಗರಿಕ ಮೂಲಸೌಕರ್ಯಗಳಿಗೆ ಹಾನಿಯನ್ನುಂಟುಮಾಡಿದೆ, ಕಿಟಕಿ ಗಾಜುಗಳು ಒಡೆದಿವೆ ಮತ್ತು ಗೋಡೆಗಳು ಬಿರುಕು ಬಿಟ್ಟಿವೆ. ದಾಳಿ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಕೂಡ ಗಡಿ ಪ್ರದೇಶಗಳಲ್ಲಿನ ಪ್ರಸ್ತುತ ಪರಿಸ್ಥಿತಿಯ ಕುರಿತು ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ್ದಾರೆ.
ಗುರುದ್ವಾರವೂ ಧ್ವಂಸ
ಇನ್ನು ಪಾಕ್ ಸೇನೆ ಕದನ ವಿರಾಮ ಉಲ್ಲಂಘಿಸಿ ನಡೆಸಿದ ದಾಳಿಯಲ್ಲಿ ಪೂಂಛ್ನಲ್ಲಿ ಗುರುದ್ವಾರವೂ ಧ್ವಂಸಗೊಂಡಿದೆ. ಶ್ರೀ ಅಕಾಲ್ ತಖ್ತ್ ಸಾಹಿಬ್ನ ಹಂಗಾಮಿ ಜಥೇದಾರ್ ಗಿಯಾನಿ ಕುಲದೀಪ್ ಸಿಂಗ್ ಗರ್ಗಜ್ ಅವರು ದಾಳಿಯನ್ನು ಖಂಡಿಸಿದ್ದಾರೆ. ಗುರುದ್ವಾರ ಶ್ರೀ ಗುರು ಸಿಂಗ್ ಸಭಾದ ಮೇಲಿನ ದಾಳಿ ಮತ್ತು ಸಿಖ್ ಜೀವಗಳ ನಷ್ಟವು ಕೇವಲ ಒಂದು ಘಟನೆಯಲ್ಲ, ಇದು ಮಾನವೀಯತೆಗೆ ಒಂದು ಹೊಡೆತ ಎಂದು ಹೇಳಿದರು. ಭಾರತ ಮತ್ತು ಪಾಕಿಸ್ತಾನ ಎರಡೂ ಉದ್ವಿಗ್ನತೆಯನ್ನು ಕಡಿಮೆ ಮಾಡಬೇಕೆಂದು ಅವರು ಒತ್ತಾಯಿಸಿದ್ದು, ಎರಡೂ ಸರ್ಕಾರಗಳು ಶಸ್ತ್ರಾಸ್ತ್ರಗಳಿಂದಲ್ಲ, ಬುದ್ಧಿವಂತಿಕೆಯಿಂದ ವರ್ತಿಸಬೇಕು ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ: Mock drill: ಆಪರೇಷನ್ ಸಿಂದೂರ್ ನಡುವೆಯೇ ಕರ್ನಾಟಕ ಸೇರಿದಂತೆ ದೇಶಾದ್ಯಂತ ಮಾಕ್ ಡ್ರಿಲ್
ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಕೂಡ ಶೆಲ್ ದಾಳಿಯನ್ನು ಖಂಡಿಸಿದರು, ಅಮ್ರಿಕ್ ಸಿಂಗ್ ರಾಗಿ, ಅಮರ್ಜೀತ್ ಸಿಂಗ್ ಮತ್ತು ಭಾಯಿ ರಂಜಿತ್ ಸಿಂಗ್ ಎಂಬ ಮೂವರು ಸಿಖ್ ಸಮುದಾಯದ ಸದಸ್ಯರು ಬಲಿಯಾಗಿದ್ದು,ಅವರ ಕುಟುಂಬಗಳಿಗೆ ಸಾಕಷ್ಟು ಪರಿಹಾರವನ್ನು ನೀಡಬೇಕೆಂದು ಅವರು ಆಗ್ರಹಿಸಿದರು.