ಹೊಸದಿಲ್ಲಿ: ಭಾರತದಿಂದ ಬಲವಾದ ಪಟ್ಟು ಬಿದ್ದ ಮೇಲೂ ಬುದ್ಧಿ ಕಲಿಯದ ಪಾಕಿಸ್ತಾನ ಶುಕ್ರವಾರ (ಮೇ 9) ಮತ್ತೆ ಭಾರತದ ಮೇಲೆ ದಾಳಿ ನಡೆಸಿದೆ (Operation Sindoor). ಹಿಂದಿನೆರಡು ದಿನಗಳಂತೆ ಕತ್ತಲಾಗುತ್ತಿದ್ದಂತೆ ಬಾಲ ಬಿಚ್ಚಿದ ಹೇಡಿ ಪಾಕಿಸ್ತಾನ ಶುಕ್ರವಾರ ಭಾರತದ ವಿವಿಧ ನಗರಗಳನ್ನು ಗುರಿಯಾಗಿಸಿಕೊಂಡು ಡ್ರೋನ್ ಮೂಲಕ ದಾಳಿ ನಡೆಸಿದೆ. ಸುಮಾರು 36 ಕಡೆ, 100ಕ್ಕೂ ಹೆಚ್ಚು ಡ್ರೋನ್ ದಾಳಿ ನಡೆದಿದ್ದು, ಭಾರತೀಯ ಸೇನೆ ದಿಟ್ಟ ಪ್ರತ್ಯುತ್ತರ ನೀಡಿ ಅವುಗಳನ್ನು ಹೊಡೆದುರುಳಿಸಿದೆ. ಈ ಮಧ್ಯೆ ಪಂಜಾಬ್ನಲ್ಲಿ ಡ್ರೋನ್ ಸ್ಫೋಟಗೊಂಡು ಮೂವರು ನಾಗರಿಕರು ಗಾಯಗೊಂಡಿದ್ದಾರೆ. ಸದ್ಯ ಅವರನ್ನು ಸೈನಿಕರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪಂಜಾಬ್ನ ಫಿರೋಜ್ಪುರದ ಮನೆ ಮೇಲೆ ಡ್ರೋನ್ ಅಪ್ಪಳಿಸಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗಡಿ ಹಂಚಿಕೊಂಡಿರುವ ಜಮ್ಮು ಕಾಶ್ಮೀರ, ರಾಜಸ್ತಾನ, ಪಂಜಾಬ್ಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ವಿವಿಧ ನಗರಗಳನ್ನು ಬ್ಲ್ಯಾಕ್ಔಟ್ ಮಾಡಲಾಗಿದ್ದು, ಮನೆಯಿಂದ ಹೊರ ಬರದಂತೆ ನಾಗರಿಕರಿಗೆ ಎಚ್ಚರಿಕೆ ನೀಡಲಾಗಿದೆ.
ಈ ಮಧ್ಯೆ ಹೊಸದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ನಿವಾಸದಲ್ಲಿ ಹೈವೋಲ್ಟೇಜ್ ಸಭೆ ನಡೆಯುತ್ತಿದ್ದು, ಪಾಕಿಸ್ತಾನದ ವಿರುದ್ಧ ಕಠಿನ ಕ್ರಮ ಕೈಗೊಳ್ಳುವ ಎಲ್ಲ ಸಾಧ್ಯತೆ ಇದೆ. ಸಚಿವರಾದ ಜೈಶಂಕರ್, ರಾಜನಾಥ್ ಸಿಂಗ್ ಈ ಸಭೆಯಲ್ಲಿ ಭಾಗವಹಿಸಿದ್ದಾರೆ.