ಶ್ರೀನಗರ: ಭಾರತ ಹಾಗೂ ಪಾಕಿಸ್ತಾನ ನಡುವೆ ಸಂಪೂರ್ಣವಾಗಿ (Operation Sindoor) ಯುದ್ಧದ ವಾತಾವರಣ ಏರ್ಪಟ್ಟಿದೆ. ಪಾಕಿಸ್ತಾನದ LOC ಬಳಿ ನಿರಂತವಾಗಿ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ. ಇದೀಗ ಡ್ರೋನ್ ಮೂಲಕ ದಾಳಿ ನಡೆಸುತ್ತಿದ್ದು, ಪಂಜಾಬ್, ರಾಜಸ್ಥಾನ ಹಾಗೂ ಗುಜರಾತಿನ ಭಾಗದಲ್ಲಿ ಡ್ರೋನ್ಗಳ ದಾಳಿ ಆಗಿದೆ. ಆದರೆ ಭಾರತದ S-400 (ಸುದರ್ಶನ ) ಅವುಗಳನ್ನು ತಡೆಹಿಡಿಯುವಲ್ಲಿ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಅಮೃತ ಸರದ ಬಳಿ ಡ್ರೋನ್ ಹಾಗೂ ಕ್ಷಿಪಣಿಗಳ ಅವಶೇಷಗಳು ಪತ್ತೆಯಾಗಿವೆ. ಶ್ರೀನಗರದ ಪ್ರಮುಖ ಪ್ರವಾಸಿ ಆಕರ್ಷಣೆಯಾದ ದಾಲ್ ಸರೋವರದ ಆಳಕ್ಕೆ ಕ್ಷಿಪಣಿಯಂತಹ ವಸ್ತುವೊಂದು ಬಿದ್ದಿದ್ದು, ಶನಿವಾರ ಬೆಳಿಗ್ಗೆ ನಗರವನ್ನು ಬೆಚ್ಚಿಬೀಳಿಸಿದ ದೊಡ್ಡ ಸ್ಫೋಟ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಇಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಬಹು ಸ್ಫೋಟಗಳ ಶಬ್ದ ಕೇಳಿಬಂದಿದೆ. ಅದೇ ಸಮಯದಲ್ಲಿ ಮೂರು ಪಾಕಿಸ್ತಾನಿ ವಾಯುನೆಲೆಗಳಲ್ಲಿ ಕನಿಷ್ಠ ಮೂರು ಸ್ಫೋಟಗಳು ಸಂಭವಿಸಿದ ವರದಿಗಳು ಬಂದಿವೆ. ಸ್ಫೋಟದ ಕುರಿತು ಯಾವುದೇ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ. ಇಂದು ಮುಂಜಾನೆ ಅಮೃತಸರದ ಮೇಲೆ ಪಾಕಿಸ್ತಾನ ಡ್ರೋನ್ ದಾಳಿ ನಡೆಸಲು ಪ್ರಯತ್ನಿಸಿದೆ. ಭಾರತೀಯ ಪಡೆಗಳು ಡ್ರೋನ್ಗಳನ್ನು ಹೊಡೆದುರುಳಿಸಿವೆ. ನಾಗರಿಕರನ್ನು ಅಪಾಯಕ್ಕೆ ಸಿಲುಕಿಸುವ ಡ್ರೋನ್ಗಳನ್ನು ಭಾರತೀಯ ವಾಯು ರಕ್ಷಣಾ ಘಟಕಗಳು ನಾಶಪಡಿಸಿವೆ ಎಂದು ಭಾರತೀಯ ಸೇನೆಯು ಹೇಳಿದೆ. ಪಾಕಿಸ್ತಾನದ ದಾಳಿಗೆ ಪ್ರತೀಕಾರವಾಗಿ ಭಾರತೀಯ ಪಡೆಗಳು ರಾತ್ರೋರಾತ್ರಿ ಹಲವಾರು ಪಾಕಿಸ್ತಾನಿ ಮಿಲಿಟರಿ ನೆಲೆಗಳು ಹಾಗೂ ಭಯೋತ್ಪಾಕ ಲಾಂಚ್ಪ್ಯಾಡ್ ಅನ್ನು ನಾಶಪಡಿಸಿವೆ.
ರಕ್ಷಣಾ ಇಲಾಖೆ ಹಾಗೂ ವಿದೇಶಾಂಗ ಇಲಾಖೆ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಪಾಕಿಸ್ತಾನದ 4 ವಾಯುನೆಲೆಗಳನ್ನು ಭಾರತೀಯ ಸೇನೆ ಧ್ವಂಸಗೊಳಿಸಿದೆ ಎಂದು ಮಾಹಿತಿ ನೀಡಿದೆ. ಪಾಕಿಸ್ತಾನ ಸುಳ್ಳು ಮಾಹಿತಿ ನೀಡಿದ್ದು, ನಮ್ಮ ಯಾವುದೇ ವಾಯುನೆಲೆಗೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ರಕ್ಷಣಾ ಇಲಾಖೆ ತಿಳಿಸಿದೆ. ಭಾರತದ ಪಶ್ಚಿಮ ಗಡಿಗಳಲ್ಲಿ ಪಾಕಿಸ್ತಾನದ ಡ್ರೋನ್ ದಾಳಿ ಮತ್ತು ಇತರ ಯುದ್ಧಸಾಮಗ್ರಿಗಳ ದಾಳಿ ಮುಂದುವರೆದಿದೆ. ಇಂದು ಬೆಳಿಗ್ಗೆ ಸರಿಸುಮಾರು 5 ಗಂಟೆಗೆ, ಅಮೃತಸರದ ಖಾಸಾ ಕ್ಯಾಂಟ್ ಮೇಲೆ ಹಾರುತ್ತಿರುವ ಬಹು ಶತ್ರು ಶಸ್ತ್ರಸಜ್ಜಿತ ಡ್ರೋನ್ಗಳು ಕಂಡುಬಂದವು. ನಮ್ಮ ವಾಯು ರಕ್ಷಣಾ ಘಟಕಗಳು ಶತ್ರು ಡ್ರೋನ್ಗಳನ್ನು ತಕ್ಷಣವೇ ತೊಡಗಿಸಿಕೊಂಡು ನಾಶಪಡಿಸಿದವು” ಎಂದು ಭಾರತೀಯ ಸೇನೆ ತಿಳಿಸಿದೆ.
ಈ ಸುದ್ದಿಯನ್ನೂ ಓದಿ: ಪಾಕಿಸ್ತಾನದ 4 ಏರ್ ಬೇಸ್ ಉಡೀಸ್, ಭಾರತೀಯ ಸೇನೆ ಸರ್ವ ಸನ್ನದ್ಧ; ಸುದ್ದಿಗೋಷ್ಠಿಯಲ್ಲಿ ಸೇನೆ ಮಾಹಿತಿ
ಶನಿವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪಾಕಿಸ್ತಾನದ ಮಿಲಿಟರಿ ವಕ್ತಾರ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ, ‘ಪಾಕ್ನ ನೂರ್ ಖಾನ್ (ಚಕ್ಲಾಲಾ, ರಾವಲ್ಪಿಂಡಿ), ಮುರಿಯ್ (ಚಕ್ವಾಲ್) ಮತ್ತು ರಫೀಕಿ (ಜಾಂಗ್ ಜಿಲ್ಲೆಯ ಶೋರ್ಕೋಟ್) ವಾಯುನೆಲೆಗಳನ್ನು ಗುರಿಯಾಗಿಸಿ ಭಾರತ ದಾಳಿ ನಡೆಸಿದೆ ಎಂದು ಖಚಿತ ಪಡಿಸಿದ್ದಾರೆ.