ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಸದ್ಯ ಭಾರಿ ಕುತೂಹಲ ಮೂಡಿಸಿರುವ ಚಿತ್ರಗಳ ಪೈಕಿ ʼಡೆವಿಲ್ʼ (The Devil) ಕೂಡ ಒಂದು. ದರ್ಶನ್ (Actor Darshan) ಅಭಿನಯದ ಸಿನಿಮಾ ಎನ್ನುವ ಕಾರಣಕ್ಕೆ ಇದು ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ʼತಾರಕ್ʼ ಚಿತ್ರದ ಬಳಿಕ ಪ್ರಕಾಶ್ ವೀರ್ (Prakash Veer) ಚಾಲೆಂಜಿಂಗ್ ಸ್ಟಾರ್ಗೆ ಆ್ಯಕ್ಷನ್ ಕಟ್ ಹೇಳುತ್ತಿರುವುದು, ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲಿಗೆ ಹೋಗಿ ಬಂದ ಬಳಿಕ ದರ್ಶನ್ ನಟಿಸುತ್ತಿರುವ ಮೊದಲ ಸಿನಿಮಾ ಹೀಗೆ ಹಲವು ಕಾರಣಗಳಿಗೆ ʼಡೆವಿಲ್ʼ ಸಿನಿಪ್ರಿಯರಲ್ಲಿ ಆಸಕ್ತಿ ಕೆರಳಿಸಿದೆ. ಜೈಲಿನಿಂದ ಹೊರ ಬಂದ ದರ್ಶನ್ ಅಲ್ಪ ಕಾಲದ ವಿಶ್ರಾಂತಿ ಬಳಿಕ ಶೂಟಿಂಗ್ನಲ್ಲಿ ಸತತವಾಗಿ ಪಾಲ್ಗೊಂಡಿದ್ದು, ಇದೀಗ ಕೊನೆಯ ಹಂತಕ್ಕೆ ಬಂದು ತಲುಪಿದೆ. ಚಿತ್ರದ ಸಂಭಾಷಣಾ ರೆಕಾರ್ಡಿಂಗ್ ಪೂರ್ತಿಯಾಗಿರುವುದಾಗಿ ಸಿನಿಮಾತಂಡ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದೆ.
ಶ್ರೀ ಜೈ ಮಾತ ಕಂಬೈನ್ಸ್ ಲಾಂಛನದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿರುವ ʼಡೆವಿಲ್ʼ ಚಿತ್ರಕ್ಕೆ ನಿರ್ದೇಶನದ ಜತೆಗೆ ಪ್ರಕಾಶ್ ವೀರ್ ಕಥೆ, ಚಿತ್ರಕಥೆ ಬರೆದಿದ್ದಾರೆ. ʼ’ದ ಡೆವಿಲ್’ ಚಲನಚಿತ್ರದ ಪ್ರಾಥಮಿಕ ಸಂಭಾಷಣಾ ರೆಕಾರ್ಡಿಂಗ್ ಯಶಸ್ವಿಯಾಗಿ ಪೂರ್ಣಗೊಂಡಿದೆʼʼ ಎಂದು ಶ್ರೀ ಜೈ ಮಾತ ಕಂಬೈನ್ಸ್ನ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಸಂತಸ ಹಂಚಿಕೊಂಡಿದೆ. ಆ ಮೂಲಕ ದರ್ಶನ್ ಅಬಿಮಾನಿಗಳಿಗೆ ಗುಡ್ನ್ಯೂಸ್ ಹೊರ ಬಿದ್ದಿದ್ದು, ಶೀಘ್ರದಲ್ಲಿಯೇ ಚಿತ್ರ ರಿಲೀಸ್ ಆಗುವ ಸಾಧ್ಯತೆ ಇದೆ.
ಶ್ರೀ ಜೈ ಮಾತ ಕಂಬೈನ್ಸ್ನ ಇನ್ಸ್ಟಾಗ್ರಾಮ್ ಪೋಸ್ಟ್:
ʼಡೆವಿಲ್ʼ ಚಿತ್ರದಲ್ಲಿ ನಾಯಕಿಯಾಗಿ ಹೊಸ ಪ್ರತಿಭೆ ರಚನಾ ರೈ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಮುಖ್ಯ ಪಾತ್ರಗಳಲ್ಲಿ ಶರ್ಮಿಳಾ ಮಾಂಡ್ರೆ, ತುಳಸಿ, ಅಚ್ಯುತ ಕುಮಾರ್, ಮಹೇಶ್ ಮಂಜ್ರೇಕರ್, ಶ್ರೀನಿವಾಸಪ್ರಭು, ಶೋಭ್ ರಾಜ್ ಮುಂತಾದ ಕಲಾವಿದರು ಅಭಿನಯಿಸುತ್ತಿದ್ದಾರೆ. ಸದ್ಯ ಸ್ಯಾಂಡಲ್ವುಡ್ನಲ್ಲಿ ಸದ್ದು ಮಾಡುತ್ತಿರುವ ಬಿ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.
ಈ ಸುದ್ದಿಯನ್ನೂ ಓದಿ: Actor Darshan: ವಿದೇಶಕ್ಕೆ ಹೋಗಲು ದರ್ಶನ್ಗೆ ಕೋರ್ಟ್ ಅನುಮತಿ; ಶೀಘ್ರದಲ್ಲೇ ತೆರೆಗೆ ಬರಲಿದೆಯಾ ಡೆವಿಲ್?
ವಿದೇಶಕ್ಕೆ ತೆರಳಲು ದರ್ಶನ್ಗೆ ಕೋರ್ಟ್ ಅನುಮತಿ
ಈ ಮಧ್ಯೆ ವಿದೇಶಕ್ಕೆ ತೆರಳಲು ದರ್ಶನ್ಗೆ ಕೋರ್ಟ್ ಅನುಮತಿ ನೀಡಿದೆ. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ 2ನೇ ಆರೋಪಿಯಾಗಿರುವ ದರ್ಶನ್ ಷರತ್ತುಬದ್ಧ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದು, ಈ ವೇಳೆ ಕೋರ್ಟ್ ಅವರಿಗೆ ಕೆಲವೊಂದು ಷರತ್ತುಗಳನ್ನು ವಿಧಿಸಿತ್ತು. ಈ ಷರತ್ತುಗಳ ಪೈಕಿ ವಿದೇಶ ಪ್ರವಾಸಕ್ಕೆ ವಿಧಿಸಿದ್ದ ನಿರ್ಬಂಧವನ್ನು ಕೋರ್ಟ್ ತೆಗೆದು ಹಾಕಿದೆ. ವಿದೇಶಕ್ಕೆ ತೆರಳಿ ಶೂಂಟಿಂಗ್ ನಡೆಸಲು ಅನುಮತಿ ನೀಡಿದೆ. ಜು. 1ರಿಂದ 27ರವರೆಗೆ ವಿದೇಶದಲ್ಲಿ ಸಿನಿಮಾ ಶೂಟಿಂಗ್ ಮಾಡಲು ಅವಕಾಶ ನೀಡಲಾಗಿದೆ. ಕೆಲವು ಷರತ್ತುಗಳನ್ನು ವಿಧಿಸುವ ಮೂಲಕ ದರ್ಶನ್ ಅವರಿಗೆ ಬೆಂಗಳೂರಿನ ಸಿಸಿಎಚ್ 57ನೇ ನ್ಯಾಯಾಲಯ ಅನುಮತಿ ಕೊಟ್ಟಿದೆ.
ಇನ್ನೂ ಮುಗಿದಿಲ್ಲ ಕಾನೂನು ಸಂಕಷ್ಟ
ರೇಣುಕಾಸ್ವಾಮಿ ಹತ್ಯೆ ಕೇಸ್ನಲ್ಲಿ ಆರೋಪಿಯಾಗಿರುವ ದರ್ಶನ್ಗೆ ಕಾನೂನು ಸಂಕಷ್ಟ ತಪ್ಪಿಲ್ಲ. ಹಳೇ ಪ್ರಕರಣದಲ್ಲಿ ಇದೀಗ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮೀ ಅವರಿಗೆ ಸಮನ್ಸ್ ಜಾರಿಯಾಗಿದೆ. ಅಪರೂಪದ ಪಕ್ಷಿಗಳನ್ನು ಸಾಕಿದ್ದಕ್ಕಾಗಿ ನಟ ದರ್ಶನ್, ಪತ್ನಿ ವಿಜಯಲಕ್ಷ್ಮೀ ಹಾಗೂ ಫಾರ್ಮ್ಹೌಸ್ ವ್ಯವಸ್ಥಾಪಕ ನಾಗರಾಜ್ ವಿರುದ್ಧ 2 ವರ್ಷಗಳ ಹಿಂದೆ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಡಬ್ಲ್ಯುಪಿಎನ ಶೆಡ್ಯೂಲ್ 2ರ ಅಡಿಯಲ್ಲಿ ಬರುವ 4 ಬಾರ್ ಹೆಡೆಡ್ ಬಾತುಗಳನ್ನು ದರ್ಶನ್ ತಮ್ಮ ಫಾರ್ಮ್ಹೌಸ್ನಲ್ಲಿ ಸಾಕುತ್ತಿದ್ದರು. ಇದೀಗ ಆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ಗೆ ನೊಟೀಸ್ ನೀಡಲಾಗಿದೆ. ಜು. 4ಕ್ಕೆ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.