Karunadu Studio

ಕರ್ನಾಟಕ

MI vs PBKS Qualifier 2: ಮುಂಬೈ ಮಣಿಸಿ ದಶಕದ ಬಳಿಕ ಫೈನಲ್‌ಗೆ ಲಗ್ಗೆಯಿಟ್ಟ ಪಂಜಾಬ್‌ ಕಿಂಗ್ಸ್‌ – Kannada News | MI vs PBKS Qualifier 2: Punjab Kings reaches first IPL final since 2014


ಅಹಮದಾಬಾದ್‌: ರನ್‌ ಮಳೆ ಸುರಿದ ಕ್ವಾಲಿಫೈಯರ್‌-2 ಪಂದ್ಯದಲ್ಲಿ 5 ಬಾರಿಯ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡವನ್ನು 5 ವಿಕೆಟ್‌ ಅಂತರದಿಂದ ಬಗ್ಗುಬಡಿದ ಪಂಜಾಬ್‌ ಕಿಂಗ್ಸ್‌ ತಂಡ ದಶಕದ ಬಳಿಕ ಫೈನಲ್‌ ಪ್ರವೇಶಿಸಿದೆ. ಜೂ.3ರಂದು ಇದೇ ಕ್ರೀಡಾಂಗಣದಲ್ಲೇ ಆರ್‌ಸಿಬಿ ವಿರುದ್ಧ ಪ್ರಶಸ್ತಿಗಾಗಿ ಸೆಣಸಾಡಲಿದೆ. ಯಾರೇ ಗೆದ್ದರು ಐಪಿಎಲ್‌ನಲ್ಲಿ ಚೊಚ್ಚಲ ಟ್ರೋಫಿಯೊಂದನ್ನು ಗೆದ್ದ ಸಾಧನೆ ಮಾಡಲಿದ್ದಾರೆ. ಕ್ವಾಲಿಫೈಯರ್‌-1 ರಲ್ಲಿ ಆರ್‌ಸಿಬಿ, ಪಂಜಾಬ್‌ಗೆ ಸೋಲುಣಿಸಿ ಫೈನಲ್‌ ಪ್ರವೇಶಿಸಿತ್ತು. ಇದೀಗ ಮತ್ತೆ ಉಭಯ ತಂಡಗಳು ಪ್ರಶಸ್ತಿ ಸುತ್ತಿನಲ್ಲಿ ಮುಖಾಮುಖಿಯಾಗಲಿವೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮಳೆಯಿಂದ ಅಡಚಣೆಯಾದ ಈ ಪಂದ್ಯದಲ್ಲಿ ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬೈ ಇಂಡಿಯನ್ಸ್‌ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 203 ರನ್‌ ಕಲೆಹಾಕಿತು. ಜಬಾಬಿತ್ತ ಪಂಜಾಬ್‌ ಕಿಂಗ್ಸ್‌, ನಾಯಕ ಶ್ರೇಯಸ್‌ ಅಯ್ಯರ್‌ ಅವರ ಅಮೋಘ ಅಜೇಯ ಅರ್ಧಶತಕದ ನೆರವಿನಿಂದ ಇನ್ನೊಂದು ಓವರ್‌ ಬಾಕಿ ಇರುವಂತೆಯೇ 5 ವಿಕೆಟ್‌ಗೆ 207 ರನ್‌ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.

ದೊಡ್ಡ ಮೊತ್ತದ ಚೇಸಿಂಗ್‌ ವೇಳೆ ಪಂಜಾಬ್‌ಗೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಮೊತ್ತ 13 ರನ್‌
ಆಗುವಷ್ಟರಲ್ಲಿ ಪ್ರಭ್‌ಸಿಮ್ರಾನ್‌ ಸಿಂಗ್‌(6) ವಿಕೆಟ್‌ ಬಿತ್ತು. ಹಿಮ್ಮುಖವಾಗಿ ಓಡಿ ರೀಸ್‌ ಟೋಪ್ಲಿ ಅದ್ಭುತ ಕ್ಯಾಚ್‌ ಹಿಡಿದು ಈ ವಿಕೆಟ್‌ ಪತನಕ್ಕೆ ಕಾರಣರಾದರು. ಮುಂಬೈ ವಿರುದ್ಧದ ಕೊನೆಯ ಲೀಗ್‌ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದ ಪ್ರಿಯಾಂಶ್ ಆರ್ಯ(20) ಈ ಪಂದ್ಯದಲ್ಲಿ ವಿಫಲರಾದರು.

ಬುಮ್ರಾಗೆ ಚಳಿ ಬಿಡಿಸಿದ ಇಂಗ್ಲಿಸ್‌

ಆರಂಭಿಕರಿಬ್ಬರ ವಿಕೆಟ್‌ ಪತನದ ಬಳಿಕ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಜೋಶ್ ಇಂಗ್ಲಿಸ್, ಪ್ರಧಾನ ವೇಗಿ ಜಸ್‌ಪ್ರೀತ್‌ ಬುಮ್ರಾ ಅವರ ಒಂದೇ ಓವರ್‌ನಲ್ಲಿ ತಲಾ 2 ಸಿಕ್ಸರ್‌ ಮತ್ತು ಬೌಂಡರಿ ಸಹಿತ 20 ರನ್‌ ಬಾರಿಸಿ ಚಳಿ ಬಿಡಿಸಿದರು. ಆದರೆ ಇವರ ಆಟ ಹೆಚ್ಚು ಹೊತ್ತು ಸಾಗಲಿಲ್ಲ. ನಾಯಕ ಹಾರ್ದಿಕ್‌ ಪಾಂಡ್ಯ ಅವರ ಸ್ಲೋ ಬೌನ್ಸರ್‌ ಎಸೆತಕ್ಕೆ ವಿಕೆಟ್‌ ಕೀಪರ್‌ ಬೇರ್‌ಸ್ಟೋಗೆ ಕ್ಯಾಚ್‌ ನೀಡಿ ವಿಕೆಟ್‌ ಕಳೆದುಕೊಂಡರು. 21 ಎಸೆತ ಎದುರಿಸಿದ ಇಂಗ್ಲಿಸ್ 38 ರನ್‌ ಕೊಡುಗೆ ನೀಡಿದರು.

ಇಂಗ್ಲಿಸ್ ವಿಕೆಟ್‌ ಬಿದ್ದ ಬಳಿಕ ಬ್ಯಾಟಿಂಗ್‌ಗೆ ಇಳಿದ ನೇಹಾಲ್ ವಧೇರಾ ಮುಂಬೈ ಬೌಲರ್‌ಗಳ ವಧೆ ಮಾಡಿ 29 ಎಸೆತಗಳಿಂದ 48 ರನ್‌ ಚಚ್ಚಿ ಪಂದ್ಯಕ್ಕೆ ಮಹತ್ವದ ತಿರುವು ತಂದುಕೊಟ್ಟರು. ಮತ್ತೊಂದು ತುದಿಯಲ್ಲಿ ನಾಯಕ ಅಯ್ಯರ್‌ ಕೂಡ ಬಿರುಸಿನ ಬ್ಯಾಟಿಂಗ್‌ ಮೂಲಕ ತಂಡದ ಮೊತ್ತವನ್ನು ಹಿಗ್ಗಿಸಿದರು. ರೀಸ್‌ ಟೋಪ್ಲಿಗೆ ಹ್ಯಾಟ್ರಿಕ್‌ ಸಿಕ್ಸರ್‌ ರುಚಿ ತೋರಿಸಿದ ಅಯ್ಯರ್‌ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಜೇಯ ಬ್ಯಾಟಿಂಗ್‌ ನಡೆಸಿದ ಅವರು 41 ಎಸೆತಗಳಲ್ಲಿ 87(8 ಸಿಕ್ಸರ್‌ 5 ಬೌಂಡರಿ) ರನ್‌ ಬಾರಿಸಿದರು. ಗೆಲುವಿಗೆ ಮೂರು ರನ್‌ ಬೇಕಿದ್ದಾಗ ಸಿಕ್ಸರ್‌ ಮೂಲಕವೇ ತಂಡಕ್ಕೆ ಗೆಲುವು ತಂದುಕೊಟ್ಟರು.

ಸೂರ್ಯ-ತಿಲಕ್‌ ಆಸರೆ

ಇದಕ್ಕೂ ಮುನ್ನ ಬ್ಯಾಟಿಂಗ್‌ ನಡೆಸಿದ ಮುಂಬೈ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಆಕ್ರಮಣಕಾರಿ ಬ್ಯಾಟಿಂಗ್‌ ಜತೆಗೆ ಪಂಜಾಬ್‌ ತಂಡದ ಕಳಪೆ ಫೀಲ್ಡಿಂಗ್‌ನಿಂದಾಗಿಯೇ ದೊಡ್ಡ ಮೊತ್ತ ಕಲೆಹಾಕಿತು. ಜಾನಿ ಬೇರ್‌ಸ್ಟೋ ಅವರು ತಿಲಕ್‌ ವರ್ಮ ಜತೆಗೂಡಿ ದ್ವಿತೀಯ ವಿಕೆಟ್‌ಗೆ 51 ರನ್‌ ಜತೆಯಾಟ ನಡೆಸಿದರು. 3 ಬೌಂಡರಿ ಮತ್ತು 2 ಸಿಕ್ಸರ್‌ ಬಾರಿಸಿದ ಬೇರ್‌ಸ್ಟೋ 38 ರನ್‌ ಗಳಿಸಿದರು. ರೋಹಿತ್‌ ಶರ್ಮ(8) ಬೇಗನೆ ಕಳೆದುಕೊಂಡರು.

ಬೇರ್‌ಸ್ಟೋ ವಿಕೆಟ್‌ ಪತನದ ಬಳಿಕ ತಿಲಕ್‌ ವರ್ಮ ಮತ್ತು ಸೂರ್ಯಕುಮಾರ್‌ ಜಿದ್ದಿಗೆ ಬಿದ್ದವರಂತೆ ಬ್ಯಾಟ್‌ ಬೀಸಿ ಪಂಜಾಬ್‌ ಬೌಲರ್‌ಗಳನ್ನು ಕೆಲ ಕಾಲ ಮನಸೋ ಇಚ್ಛೆ ದಂಡಿಸಿದರು. ಉಭಯ ಆಟಗಾರರು ಕೂಡ 44 ರನ್‌ ಗಳಿಸಿದರು. ಸೂರ್ಯಕುಮಾರ್‌ 3 ಸಿಕ್ಸರ್‌ ಮತ್ತು 4 ಬೌಂಡರಿ ಸಿಡಿಸಿದರೆ, ತಿಲಕ್‌ ವರ್ಮ ತಲಾ 2 ಸಿಕ್ಸರ್‌ ಮತ್ತು ಬೌಂಡರಿ ಬಾರಿಸಿದರು. ಸೂರ್ಯಕುಮಾರ್‌(720) ಅವರು 15 ರನ್‌ ಬಾರಿಸುತ್ತಿದ್ದಂತೆ ಆರಂಭಿಕನಲ್ಲದೆ ಐಪಿಎಲ್‌ನ ಒಂದೇ ಆವೃತ್ತಿಯಲ್ಲಿ ಅತಿಹೆಚ್ಚು ರನ್‌ ಗಳಿಸಿದ ಬ್ಯಾಟರ್‌ ಎಂಬ ದಾಖಲೆ ನಿರ್ಮಿಸಿದರು. ಇದಕ್ಕೂ ಮುನ್ನ ಈ ದಾಖಲೆ ವಿಲಿಯರ್ಸ್‌( 687) ಹೆಸರಿನಲ್ಲಿತ್ತು.

ಇದನ್ನೂ ಓದಿ IPL 2025 final: ಐಪಿಎಲ್​ ಫೈನಲ್ ಪಂದ್ಯದ ಆಹ್ವಾನ ತಿರಸ್ಕರಿಸಿದ ಮೂರು ಸೇನಾ ಮುಖ್ಯಸ್ಥರು!

ಅಂತಿಮ ಹಂತದಲ್ಲಿ ನಮನ್ ಧೀರ್ 18 ಎಸೆತಗಳಲ್ಲಿ 37 ರನ್‌ ಬಾರಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ನಾಯಕ ಪಾಂಡ್ಯ(15) ಗಳಿಸಿ ಬೇಗನೆ ವಿಕೆಟ್‌ ಕಳೆದುಕೊಂಡರು. ಪಂಜಾಬ್‌ ಪರ ಪ್ರಧಾನ ವೇಗಿ ಅರ್ಶ್‌ದೀಪ್‌ ಸಿಂಗ್‌ 44 ರನ್‌ ಬಿಟ್ಟುಕೊಟ್ಟು ದುಬಾರಿಯಾದರು. ಅವರಿಂದ ಒಂದು ವಿಕೆಟ್‌ ಕೂಡ ಕೀಳಲು ಸಾಧ್ಯವಾಗಲಿಲ್ಲ. ಅಜ್ಮತುಲ್ಲಾ ಒಮರ್ಜೈ ಎರಡು ವಿಕೆಟ್‌ ಕಿತ್ತರು. ಉಳಿದಂತೆ ಕೈಲ್‌ ಜಾಮಿಸನ್‌, ಮಾರ್ಕಸ್‌ ಸ್ಟೋಯಿನಿಸ್‌ ಮತ್ತು ಚಹಲ್‌ ತಲಾ ಒಂದು ವಿಕೆಟ್‌ ಕಿತ್ತರು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »