Karunadu Studio

ಕರ್ನಾಟಕ

RCB vs PBKS: ಸತತ 18 ವರ್ಷಗಳ ಬಳಿಕ ಚೊಚ್ಚಲ ಐಪಿಎಲ್‌ ಟ್ರೋಫಿ ಗೆದ್ದ ಆರ್‌ಸಿಬಿ! – Kannada News | Royal Challengers Bengaluru won Maiden IPL Trophy after beating Punjab Kings by 6 Runs in the Final game


ಅಹಮದಾಬಾದ್‌: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ 18 ವರ್ಷಗಳ ಕನಸು ನನಸಾಗಿದೆ. 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯಲ್ಲಿ ರಜತ್‌ ಪಟಿದಾರ್‌ ನಾಯಕತ್ವದ ಆರ್‌ಸಿಬಿ ತಂಡ ಚೊಚ್ಚಲ ಚಾಂಪಿಯನ್‌ ಆಗಿದೆ. ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನ ತೋರಿದ ಆರ್‌ಸಿಬಿ ತಂಡ, ಫೈನಲ್‌ ಹಣಾಹಣಿಯಲ್ಲಿ ಶ್ರೇಯಸ್‌ ಅಯ್ಯರ್‌ ನಾಯಕತ್ವದ ಪಂಜಾಬ್‌ ಕಿಂಗ್ಸ್‌ (PBKS) ವಿರುದ್ಧ 6 ರನ್‌ಗಳ ರೋಚಕ ಗೆಲುವು ಸಾಧಿಸಿತು. ಆ ಮೂಲಕ ವಿಶ್ವದಾದ್ಯಂತ ಆರ್‌ಸಿಬಿ ಅಭಿಮಾನಿಗಳ ಕಪ್‌ ಗೆಲ್ಲುವ ಪ್ರಾರ್ಥನೆ ಈಡೇರಿತು.

ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಆರ್‌ಸಿಬಿ ನೀಡಿದ್ದ 191 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಪಂಜಾಬ್‌ ಕಿಂಗ್ಸ್‌ ತಂಡ, ಶಶಾಂಕ್‌ ಸಿಂಗ್‌ ಏಕಾಂಗಿ ಹೋರಾಟದ ಹೊರತಾಗಿಯೂ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 184 ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ ಕೇವಲ 6 ರನ್‌ಗಳಿಂದ ಪಂಜಾಬ್‌ ಕಿಂಗ್ಸ್‌ ಸೋಲು ಒಪ್ಪಿಕೊಂಡಿತು.

RCB vs PBKS: ಶಿಖರ್‌ ಧವನ್‌ರ ಐಪಿಎಲ್‌ ಬೌಂಡರಿ ದಾಖಲೆ ಮುರಿದ ವಿರಾಟ್‌ ಕೊಹ್ಲಿ!

ಗುರಿಯನ್ನು ಹಿಂಬಾಲಿಸಿದ ಪಂಜಾಬ್‌ ಕಿಂಗ್ಸ್‌, ಈ ಪಂದ್ಯವನ್ನು ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಅದರಂತೆ ಪ್ರಿಯಾಂಶ್‌ ಆರ್ಯ ಹಾಗೂ ಪ್ರಭ್‌ ಸಿಮ್ರನ್‌ ತಮ್ಮ ತಂಡಕ್ಕೆ ಉತ್ತಮ ಆರಂಭವನ್ನು ತಂದುಕೊಟ್ಟಿದ್ದರು. ಆದರೆ, 24 ರನ್‌ ಗಳಿಸಿದ ಪ್ರಿಯಾಂಶ್‌ ಆರ್ಯ ಅವರನ್ನು ಔಟ್‌ ಮಾಡುವ ಮೂಲಕ ಜಾಶ್‌ ಹೇಝಲ್‌ವುಡ್‌ ಆರ್‌ಸಿಬಿಗೆ ಬ್ರೇಕ್‌ ತಂದುಕೊಟ್ಟರು. ನಂತರ ಪ್ರಭ್‌ ಸಿಮ್ರನ್‌ 26 ರನ್‌ಗಳಿಸಿ ವಿಕೆಟ್‌ ಒಪ್ಪಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ನಾಯಕ ಶ್ರೇಯಸ್‌ ಅಯ್ಯರ್‌ (1) ಅವರನ್ನು ರೊಮ್ಯಾರಿಯೊ ಶೆಫರ್ಡ್‌ ಔಟ್‌ ಮಾಡಿ ಪಂದ್ಯಕ್ಕೆ ಟರ್ನಿಂಗ್‌ ಪಾಯಿಂಟ್‌ ತಂದುಕೊಟ್ಟರು.



ನಂತರ ಕೆಲ ಕಾಲ ಸ್ಪೋಟಕ ಬ್ಯಾಟ್‌ ಮಾಡಿ 39 ರನ್‌ ಗಳಿಸಿದ್ದ ಜಾಶ್‌ ಇಂಗ್ಲಿಸ್‌ ಪಂಜಾಬ್‌ಗೆ ಗೆಲುವಿನ ಭರವಸೆಯನ್ನು ಮೂಡಿಸಿದ್ದರು. ಆದರೆ, ಇವರನ್ನು ನಿರ್ಣಾಯಕ ಸಮಯದಲ್ಲಿ ಕೃಣಾಲ್‌ ಪಾಂಡ್ಯ ಔಟ್‌ ಮಾಡಿದರು. ನೆಹಾಲ್‌ ವಧೇರಾ ಹಾಗೂ ಮಾರ್ಕಸ್‌ ಸ್ಟೋಯ್ನಿಸ್‌ ಅವರನ್ನು ಭುವನೇಶ್ವರ್‌ ಕುಮಾರ್‌ ಕಟ್ಟಿ ಹಾಕಿದರು. ಕೊನೆಯ ಓವರ್‌ವರೆಗೂ ಕಠಿಣ ಹೋರಾಟ ನಡೆಸಿದ್ದ ಶಶಾಂಕ್‌ ಸಿಂಗ್‌, ಕೇವಲ 30 ಎಸೆತಗಳಲ್ಲಿ 6 ಸಿಕ್ಸರ್‌ ಹಾಗೂ 3 ಬೌಂಡರಿಗಳೊಂದಿಗೆ ಅಜೇಯ 61 ರನ್‌ ಗಳಿಸಿದರು. ಆದರೂ ಪಂಜಾಬ್‌ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಆರ್‌ಸಿಬಿ ಪರ ಕೃಣಾಲ್‌ ಪಾಂಡ್ಯ ಹಾಗೂ ಭುವನೇಶ್ವರ್‌ ಕುಮಾರ್‌ ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸಿದರು.



190 ರನ್‌ ಗಳಿಸಿದ್ದ ಆರ್‌ಸಿಬಿ

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ, ಯಾವುದೇ ಬ್ಯಾಟ್ಸ್‌ಮನ್‌ ದೊಡ್ಡ ಮೊತ್ತವನ್ನು ಕಲೆ ಹಾಕದಿದ್ದರೂ ತನ್ನ ಪಾಲಿನ 20 ಓವರ್‌ಗಳಿಗೆ 9 ವಿಕೆಟ್‌ಗಳ ನಷ್ಟಕ್ಕೆ 190 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ಪಂಜಾಬ್‌ ಕಿಂಗ್ಸ್‌ಗೆ 191 ರನ್‌ಗಳ ಗುರಿಯನ್ನು ನೀಡಿತು. 35 ಎಸೆತಗಳಲ್ಲಿ 43 ರನ್‌ಗಳನ್ನು ಕಲೆ ಹಾಕಿದ ವಿರಾಟ್‌ ಕೊಹ್ಲಿ ಆರ್‌ಸಿಬಿ ಪರ ವೈಯಕ್ತಿಕ ಗರಿಷ್ಠ ಮೊತ್ತವನ್ನು ಕಲೆ ಹಾಕಿದರು.



ಮೊದಲನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದ ಫಿಲ್‌ ಸಾಲ್ಟ್‌ ಫೈನಲ್‌ ಪಂದ್ಯದಲ್ಲಿ 9 ಎಸೆತಗಳಲ್ಲಿ 16 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಮಯಂಕ್‌ ಅಗರ್ವಾಲ್‌ (24 ರನ್‌) ಹಾಗೂ ರಜತ್‌ ಪಾಟಿದಾರ್‌ (26 ರನ್‌) ಅವರು ಸಿಕ್ಕ ಉತ್ತಮ ಆರಂಭದಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ವಿಫಲರಾದರು. 15 ಎಸೆತಗಳಲ್ಲಿ 25 ರನ್‌ ಸಿಡಿಸಿದ್ದ ಲಿಯಾಮ್‌ ಲಿವಿಂಗ್‌ಸ್ಟೋನ್‌ ಕೂಡ ಇನಿಂಗ್ಸ್‌ ಮುಗಿಸುವಲ್ಲಿ ವಿಫಲರಾದರು.

ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ್ದ ವಿರಾಟ್‌ ಕೊಹ್ಲಿ ನಿಧಾನಗತಿಯಲ್ಲಿ ಆಡಿದರು. ಅವರು ಆಡಿದ್ದ 35 ಎಸೆತಗಳಲ್ಲಿ 3 ಬೌಂಡರಿಗಳೊಂದಿಗೆ 43 ರನ್‌ಗಳನ್ನು ಬಾರಿಸಿದರು. ಆದರೆ, ಅಝಮತ್‌ವುಲ್ಲಾ ಒಮರ್ಜಾಯ್‌ಗೆ ವಿಕೆಟ್‌ ಒಪ್ಪಿಸಿದರು. 10 ಎಸೆತಗಳಲ್ಲಿ 24 ರನ್‌ ಸಿಡಿಸಿದ್ದ ಜಿತೇಶ್‌ ಶರ್ಮಾ ಒಂದು ಹಂತದಲ್ಲಿ ಭರವಸೆಯನ್ನು ಮೂಡಿಸಿದ್ದರು. ಆದರೆ, ವೈಶಾಖ್‌ ವಿಜಯ್‌ಕುಮಾರ್‌ಗೆ ಕ್ಲೀನ್‌ ಬೌಲ್ಡ್‌ ಆದರು. ಕೊನೆಯಲ್ಲಿ ರೊಮ್ಯಾರಿಯೊ ಶೆಫರ್ಡ್‌ 9 ಎಸೆತಗಳಲ್ಲಿ 17 ರನ್‌ಗಳನ್ನು ಗಳಿಸಿದರಾದರೂ ಇನಿಂಗ್ಸ್‌ ಅನ್ನು ಮುಗಿಸುವಲ್ಲಿ ವಿಫಲರಾದರು. ಅಂತಿಮವಾಗಿ ಆರ್‌ಸಿಬಿಗೆ ಕೊನೆಯಲ್ಲಿ 20 ರನ್‌ಗಳು ಕಡಿಮೆಯಾದವು.



ಪಂಜಾಬ್‌ ಕಿಂಗ್ಸ್‌ ಪರ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನವನ್ನು ತೋರಿದ ಅರ್ಷದೀಪ್‌ ಸಿಂಗ್‌ ಹಾಗೂ ಕೈಲ್‌ ಜೇಮಿಸನ್‌ ಅವರು ಹೆಚ್ಚು ರನ್‌ ಬಿಟ್ಟುಕೊಟ್ಟರೂ ತಲಾ 3 ವಿಕೆಟ್‌ಗಳನ್ನು ಕಬಳಿಸಿದರು. ಅಝಮತ್‌ವುಲ್ಲಾ ಒಮರ್ಜಾಯ್‌, ಯುಜ್ವೇಂದ್ರ ಚಹಲ್‌ ಹಗೂ ವೈಶಾಖ್‌ ವಿಜಯ್‌ಕುಮಾರ್‌ ತಲಾ ಒಂದೊಂದು ವಿಕೆಟ್‌ ಕಿತ್ತರು.

ಸ್ಕೋರ್‌ ವಿವರ

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: 20 ಓವರ್‌ಗಳಿಗೆ 190-9 (ವಿರಾಟ್‌ ಕೊಹ್ಲಿ 43, ರಜತ್‌ ಪಾಟಿದಾರ್‌ 26, ಲಿಯಾಮ್‌ ಲಿವಿಂಗ್‌ಸ್ಟೋನ್‌ 25; ಅರ್ಷದೀಪ್‌ ಸಿಂಗ್‌ 40 ಕ್ಕೆ 3, ಕೈಲ್‌ ಜೇಮಿಸನ್‌ 48 ಕ್ಕೆ 3)

ಪಂಜಾಬ್‌ ಕಿಂಗ್ಸ್‌: 20 ಓವರ್‌ಗಳಿಗೆ 184-7 (ಶಶಾಂಕ್‌ ಸಿಂಗ್‌ 61*, ಜಾಶ ಇಂಗ್ಲಿಸ್‌ 39; ಕೈಣಾಲ್‌ ಪಾಂಡ್ಯ 17 ಕ್ಕೆ 2, ಭುವನೇಶ್ವರ್‌ ಕುಮಾರ್‌ 38 ಕ್ಕೆ 2)

ಪಂದ್ಯ ಶ್ರೇಷ್ಠ ಪ್ರಶಸ್ತಿ: ಕೃಣಾಲ್‌ ಪಾಂಡ್ಯ





Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »